
ಬೆಂಗಳೂರು: ಇತ್ತೀಚಿಗೆ ಹರಿಯಾಣ ರಾಜ್ಯದ ಖಾಸಗಿ ಶಾಲೆಯಲ್ಲಿ ನಡೆದ ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇತ್ತ ರಾಜಧಾನಿಯಲ್ಲೂ ಖಾಸಗಿ ಶಾಲೆಯೊಂದರ ಆವರಣದಲ್ಲಿ ನಾಲ್ಕು ವರ್ಷದ ಎಲ್ಕೆಜಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.
ಮಂಗಳವಾರ ಬಾಗಲುಗುಂಟೆ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಸಮೀಪ ಖಾಸಗಿ ಶಾಲೆಯಲ್ಲಿ ಈ ಹೀನಾಯ ಕೃತ್ಯ ನಡೆದಿದ್ದು, ಘಟನೆ ಸಂಬಂಧ ಶಾಲೆಯ ಐವರು ಸೆಕ್ಯುರಿಟಿ ಗಾರ್ಡ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಲೆ ಮುಗಿಸಿಕೊಂಡು ಮನೆಗೆ ಮರಳಿದ ಮಗಳು ತೀವ್ರ ಅಸ್ವಸ್ಥವಾಗಿರುವುದನ್ನು ಕಂಡು ಆತಂಕಗೊಂಡ ಪೋಷಕರು, ಕೂಡಲೇ ಆಕೆಯನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ವೈದ್ಯಕೀಯ ತಪಾಸಣೆ ನಡೆಸಿದ ಅಲ್ಲಿನ ವೈದ್ಯರು, ಬಾಲಕಿಯು ಲೈಂಗಿಕ ಶೋಷಣೆ ತುತ್ತಾಗಿದ್ದಾಳೆ ಎಂದಿದ್ದಾರೆ.
ಬಳಿಕ ಪೋಷಕರು ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸಂತ್ರಸ್ತೆ ಕುಟುಂಬವು ದಾಸರಹಳ್ಳಿ ವ್ಯಾಪ್ತಿಯಲ್ಲಿ ನೆಲೆಸಿದ್ದು, ಮನೆ ಹತ್ತಿರದ ಶಾಲೆಯಲ್ಲೇ ಮಗಳನ್ನು ದಾಖಲು ಮಾಡಿದ್ದರು. ಎಲ್ಕೆಜಿ ವ್ಯಾಸಂಗ ಮಾಡುತ್ತಿದ್ದ ಆಕೆ, ಬೆಳಗ್ಗೆ 10 ಗಂಟೆಗೆ ಶಾಲೆಗೆ ತೆರಳಿ ಮಧ್ಯಾಹ್ನ ಮನೆಗೆ ಮರಳುತ್ತಿದ್ದಳು. ಆದರೆ, ಪ್ರತಿ ದಿನವು ಶಾಲೆಯಿಂದ ಮನೆಗೆ ಬಂದಾಗ ಲವಲವಿಕೆಯಿಂದ ಕೂಡಿರುತ್ತಿದ್ದ ಮಗಳು, ಮಂಗಳವಾರ ಆಕೆ ಎಂದಿನಂತೆ ಇರಲಿಲ್ಲ. ಮಗು ತುಂಬಾ ಮಂಕಾಗಿದ್ದಳು. ಎರಡ್ಮೂರು ಬಾರಿ ವಾಂತಿ ಸಹ ಮಾಡಿಕೊಂಡು ತೀವ್ರ ಅಸ್ವಸ್ಥಳಾದಳು. ಮಗಳ ಆರೋಗ್ಯದಲ್ಲಿ ಹಠಾತ್ತಾಗಿ ಉಂಟಾದ ಬದಲಾವಣೆಯು ಪೋಷಕರಲ್ಲಿ ದಿಗಿಲು ಮೂಡಿಸಿತು. ಆತಂಕಗೊಂಡ ಅವರು, ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಹೀನಾಯ ಕೃತ್ಯ ಬಯಲಾಗಿದೆ ಎಂದು ಮೂಲಗಳು ಹೇಳಿವೆ.
ಸೆಕ್ಯುರಿಟಿ ಅಂಕಲ್ ಅಂದ ಮಗು: ತನ್ನ ಮೇಲೆ ನಡೆದ ಪೈಶಾಚಿಕ ಕೃತ್ಯದಿಂದ ಮಗು ಆಘಾತಗೊಂಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಮುಂದುವರೆದಿದ್ದು, ಮಗು ಚೇತರಿಕೆ ಬಳಿಕ ಹೇಳಿಕೆ ಪಡೆಯಲಾಗುತ್ತದೆ. ಈಗ ವೈದ್ಯರು ಹಾಗೂ ಪೋಷಕರ ಬಳಿ ತನ್ನ ಜತೆ ಸೆಕ್ಯುರಿಟಿ ಅಂಕಲ್ ಕೆಟ್ಟದಾಗಿ ನಡೆದುಕೊಂಡರು ಎಂದಿದ್ದಾಳೆ. ಈ ಮಾಹಿತಿ ಮೇರೆಗೆ ಶಾಲೆಯ ಐವರು ಸೆಕ್ಯುರಿಟಿ ಗಾಡ್
ಗರ್ಳನ್ನು ವಶಕ್ಕೆ ಪಡೆಯಲಾಗಿದ್ದು, ಆ ಪೈಕಿ ಓರ್ವನ ಮೇಲೆ ಅನುಮಾನವಿದೆ. ಆತನನ್ನು ಸಂತ್ರಸ್ತೆ ಮುಂದೆ ಹಾಜರುಪಡಿಸಲಾಗುತ್ತದೆ.
ಆಕೆ ಗುರುತು ಪತ್ತೆ ಹಚ್ಚಿದ ಬಳಿಕ ನಂತರ ಬಂಧಿಸಲಾಗುತ್ತದೆ. ಅಲ್ಲದೆ ಶಾಲೆಯ ಸಿಸಿಟೀವಿ ಕ್ಯಾಮೆರಾಗಳನ್ನು ಜಪ್ತಿ ಮಾಡಿ ಪರಿಶೀಸಿಲಾಗುತ್ತದೆ. ಇದರಲ್ಲಿ ಶೋಷಿತ ವಿದ್ಯಾರ್ಥಿನಿ ಚಲವಲನದ ದೃಶ್ಯಾವಳಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಹರಿಯಾಣ ರಾಜ್ಯದ ಖಾಸಗಿ ಶಾಲೆಯಲ್ಲಿ ಏಳು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಾಲೆಯ ಸಿಬ್ಬಂದಿ, ಬಳಿಕ ವಿದ್ಯಾರ್ಥಿ ಗಂಟಲು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದ. ಈ ಕೃತ್ಯದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.