ನವದೆಹಲಿ(ಅ.02): ಭಾರತ-ಪಾಕಿಸ್ತಾನ ಗಡಿಯ ಉದ್ವಿಗ್ನತೆ ವಿಜಯರಪುರ ಜಿಲ್ಲೆಯ ನಿವೃತ್ತ ಯೋಧರ ನರನಾಡಿಗಳನ್ನು ಉರಿಸಿದೆ. ಭಾರತ ಮಾತೆ ರಕ್ಷಣೆಗೆ ಮತ್ತೆ ಬಂದೂಕು ಹಿಡಿಯಲು ಮುಂದಾಗಿದ್ದಾರೆ. ದೇಶಕ್ಕಾಗಿ ನಾವು ಮತ್ತೆ ಬಂದೂಕು ಹಿಡಿಯಲು ಸಿದ್ಧ ಅಂತ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಆಟಾಟೋಪಕ್ಕೆ ನಮ್ಮ ದೇಶ ಖಡಕ್ ಉತ್ತರವನ್ನೇ ನೀಡಿದೆ. ಆದರೆ ನಮ್ಮ ಸೇನೆ ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ಅದಕ್ಕಾಗಿ ನಾವು ಮತ್ತೆ ಬಂದೂಕು ಹಿಡಿಯಲೂ ಸಿದ್ಧ ಅಂತ ಸುಮಾರು 50ಕ್ಕೂ ಹೆಚ್ಚು ನಿವೃತ್ತ ಸೈನಿಕರು ವಿಜಯಪುರದಲ್ಲಿ ಬೀದಿಗಿಳಿದು ಸೇನೆಗೆ ಬೆಂಬಲ ಸೂಚಿಸಿದ್ದಾರೆ.
ಇನ್ನು ಮೃತ ಯೋಧರ ಕುಟುಂಬಗಳಿಗೆ ಜಿಲ್ಲೆಯ ನೂರಾರು ಯೋಧರು ತಮ್ಮ ಒಂದು ತಿಂಗಳದ ಪೆನ್ಷನ್ ಹಣವನ್ನು ನೀಡುತ್ತೇವೆ ಅಂತ ಘೋಷಿಸಿದ್ದಾರೆ. ಒಟ್ಟಿನಲ್ಲಿ ಭಾರತ ಮಾತೆಯ ರಕ್ಷಣೆಗೆ ನಿವೃತ್ತ ಯೋಧರು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿರುವುದು ದೇಶದಲ್ಲಿ ಇದೇ ಪ್ರಥಮ.