ವಿಜಯಪುರ(ಅ.02): 64 ವರ್ಷಗಳ ಹಿಂದೆ ಅಂತ್ಯಕ್ರಿಯೆ ಮಾಡಿದ್ದ ವ್ಯಕ್ತಿ ಸಮಾಧಿಯಿಂದ ಶವವೊಂದನ್ನು ಹೊರತೆಗೆದು ಮತ್ತೆ ಮುಸ್ಲಿಂ ಧರ್ಮದಂತೆ ಅಂತ್ಯಕ್ರಿಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಮುದ್ದೇ ಬಿಹಾಳ ತಾಲೂಕಿನ ಹೊಕ್ರಾಣಿ ಎಂಬ ಗ್ರಾಮ ಇಂತದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹೊಕ್ರಾಣಿ ಗ್ರಾಮದ ಹನುಮಂತ ಮುತ್ಯಾ ಕೊಂಗನೂರು ಎಂಬ ವ್ಯಕ್ತಿ ಹುಟ್ಟಾ ಹಿಂದು ಧರ್ಮದವನಾಗಿದ್ದರೂ ಮುಸ್ಲಿಂ ಧರ್ಮಿಯರಿಗಿಂತ ಹೆಚ್ಚಾಗಿ ಅಲ್ಹಾನನ್ನು ಪೂಜಿಸುತ್ತಿದ್ದ. ಅಲ್ಲದೇ ಪ್ರತಿ ವರ್ಷ ಮೊಹರಂ ಬಂತೆಂದರೆ ಸಾಕು ಹನುಮಂತನ ಮೈಯಲ್ಲಿ ಮುಸ್ಲಿಂ ದೇವರು ಬರುತ್ತಿದ್ದರಂತೆ. ಆತನ ನಿಧನದ ನಂತರ ಗ್ರಾಮದ ಜುಮ್ಮಣ್ಣ ಜುಗಲಿ ಎಂಬುವವರು ತಮ್ಮ ಹೊಲದಲ್ಲಿ ಹಿಂದೂ ಸಂಪ್ರದಾಯದಂತೆ ಆತನ ಅಂತ್ಯಕ್ರಿಯೆ ಮಾಡಿದ್ದರು.
ಆದರೆ, ಇತ್ತೀಚಿಗೆ ಗ್ರಾಮದ ಕೆಲವ್ರ ಮನಸ್ಸಿನಲ್ಲಿ ನಾನಿನ್ನೂ ಕುಳಿತಿದ್ದೇನೆ. ನನ್ನನ್ನು ಮಲಗಿಸಿ ಎಂದು ಹನುಮಂತ ಮುತ್ಯಾ ಬಂದು ಹೇಳಿದಂತಾಯಿತಂತೆ. ಹೀಗಾಗಿ ಗ್ರಾಮದ ಹಿರಿಯರು ಮುತ್ಯಾನ ಶವ ಹೊರ ತೆಗೆದು ಮುಸ್ಲಿಂ ಧಾರ್ಮಿಕ ವಿಧಿ-ವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿ ಗೋರಿ ಕಟ್ಟಿದ್ದಾರೆ.