
ಗಾಜಿಯಾಬಾದ್(ಅ.08): ದೇಶದ ಭದ್ರತೆಗೆ ಸಂಬಂಧಿಸಿದ ಯಾವುದೇ ಸವಾಲುಗಳನ್ನು ಎದುರಿಸಲು ನಾವು ಸಿದ್ದರಾಗಿದ್ದು, ಯಾವುದೇ ಕ್ಷಣದಲ್ಲೂ ಎರಡೂ ದೇಶಗಳೊಂದಿಗೆ ನಾವು ಯುದ್ಧಕ್ಕೆ ಸಿದ್ದರಿದ್ದೇವೆ' ಎಂದು ವಾಯುಪಡೆಯ ಮುಖ್ಯಸ್ಥರಾದ ಬಿ.ಎಸ್. ಧನೋವಾ ತಿಳಿಸಿದ್ದಾರೆ.
ಗಾಜಿಯಾಬಾದ್'ನ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯು ಪಡೆಯ 85ನೇ ವಾರ್ಷಿಕೋತ್ಸವದಲ್ಲಿ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಭದ್ರತೆಯ ಕಾರಣಗಳಿಂದಾಗಿ ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ಭಾರತೀಯ ಸೇನೆ ಹಾಗೂ ನೌಕಾಪಡೆ ಜಂಟಿಯಾಗಿ ದಾಳಿ ನಡೆಸಲು ತಯಾರಾಗಿವೆ.
"ಎಲ್ಲಾ ನಮ್ಮ ವಾಯುಪಡೆ ಯೋಧರ ಪರವಾಗಿ ವಾಯು ದಾಳಿಗಳ ಮೂಲಕ ನಮ್ಮ ದೇಶದ ಸಾರ್ವಭೌಮತ್ವವನ್ನು ರಕ್ಷಿಸುತ್ತೇವೆ ಎಂದು ನಾನು ದೇಶಕ್ಕೆ ಭರವಸೆ ನೀಡುತ್ತೇನೆ. ಐಎಎಫ್ ಎಲ್ಲಾ ವಾಯುಪಡೆಯ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ. ನೆರೆಯ ದೇಶಗಳ ಸಾಂಪ್ರದಾಯಿಕ ಬೆದರಿಕೆಯನ್ನು ಒಳಗೊಂಡಂತೆ ನಾವು ಯಾವುದೇ ಬೆದರಿಕೆಯನ್ನು ಎದುರಿಸಲು ಮತ್ತು ಭವಿಷ್ಯದ ದಾಳಿಗಳನ್ನು ಹಿಮ್ಮೆಟ್ಟಿಸಲು ನಮ್ಮ ಪಡೆ ಸಜ್ಜಾಗಿದೆ' ಎಂದು ತಿಳಿಸಿದ್ದಾರೆ.
ಏಕಕಾಲದಲ್ಲಿ ಎದುರಿಸಲು ಸಿದ್ಧ
2 ದಿನಗಳ ಹಿಂದಷ್ಟೆ ಏಕಕಾಲದಲ್ಲಿ ಚೀನಾ ಹಾಗೂ ಪಾಕಿಸ್ತಾನ ಎರಡೂ ದೇಶಗಳ ವಿರುದ್ಧ ಯುದ್ಧಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದರು. ಸಿಕ್ಕಿಂ ರಾಜ್ಯದ ದೋಕ್ಲಂ ಪ್ರದೇಶದಲ್ಲಿ ಉಂಟಾದ ಭೂವಿವಾದ ಎರಡೂ ದೇಶಗಳ ನಡುವೆ ಯುದ್ಧದ ಆತಂಕವನ್ನು ಸೃಷ್ಟಿಸಿತ್ತು. ಅಲ್ಲದೆ ಪಾಕಿಸ್ತಾನದಿಂದ ಪರೋಕ್ಷವಾಗಿ ಆಂತರಿಕ ಬೆದರಿಕೆಯನ್ನು ಭಾರತ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಮೃತಪಟ್ಟ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥರಾದ ಅರ್ಜನ್ ಸಿಂಗ್ ಗೌರವ ಸೂಚಿಸಲಾಯಿತು.
1932ರಲ್ಲಿ ಬ್ರಿಟಿಷ್ ಆಡಳಿತದಿಂದ ಭಾರತೀಯ ವಾಯುಪಡೆ ಸ್ಥಾಪನೆಯಾಗಿದ್ದು, ಅವರ ಆಳ್ವಿಕೆಯ ನಂತರ ಭಾರತ ಸ್ವತಂತ್ರಗೊಂಡು ಅಮೆರಿಕಾ, ರಷ್ಯಾ, ಚೀನಾ ನಂತರ ವಿಶ್ವದ ಅತೀ ಹೆಚ್ಚು ಶಕ್ತಿಶಾಲಿ ಬೃಹತ್'ದಾದ ದಳವಾಗಿ ವಾಯುಪಡೆ ಬೆಳದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.