
ಬೆಂಗಳೂರು(ಫೆ.06): ಸಾಮಾಜಿಕ ಒಳಿತಿನ ವಿಷಯವಾಗಿ ಜನ-ಜಾಗೃತಿ ಮೂಡಿಸುವಲ್ಲಿ ಪ್ರಭಾವ ಶಾಲಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರ ಸಾಮಾಜಿಕ ಜಾಲತಾಣ ತಂಡದ ಸದಸ್ಯರೊಬ್ಬರಿಗೆ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಭಾನುವಾರ ರಾತ್ರಿ ಎಂ.ಜಿ.ರಸ್ತೆಯ ಜುಪಿಟರ್ ಸೆಂಟರ್'ನಲ್ಲಿನ ಕಚೇರಿಯಿಂದ ಕೆಲಸ ಮುಗಿಸಿಕೊಂಡು ಮೆಟ್ರೋ ಸ್ಟೇಷನ್ಗೆ ತೆರಳುವ ವೇಳೆ ಉದ್ಯೋಗಿಯನ್ನು ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಅಡ್ಡಗಟ್ಟಿ ಧಮಕಿ ಹಾಕಿದ್ದಾರೆ. ‘ನೀನು ರಾಜೀವ್ ಚಂದ್ರಶೇಖರ್ ಕಚೇರಿಯಲ್ಲಿ ಕೆಲಸ ಮಾಡುತ್ತೀಯಾ’ ಎಂದು ಆ ಆಗಂತುಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉದ್ಯೋಗಿ ಹೌದು ಎಂದಿದ್ದಾರೆ. ನಂತರ ಮುಂದುವರೆದು, ‘ನೀನು ಸಾಮಾಜಿಕ ಜಾಲತಾಣವನ್ನು ನಿರ್ವಹಿಸುತ್ತೀಯಾ’ ಎಂದು ಕೇಳಿದ್ದಾರೆ.
ಅದಕ್ಕೂ ಆ ಉದ್ಯೋಗಿ ಹೌದು ಎಂಬ ಉತ್ತರ ನೀಡಿದ್ದಾರೆ. ಈ ಮಾತಿಗೆ ಕೋಪಗೊಂಡ ಆರೋಪಿಗಳು, ‘ನಿನ್ನ ಕೆಲಸ ಮಾಡು. ಕೆಲಸದ ರೀತಿ ಬದಲಿಸಿಕೋ’ ಎಂದಿದ್ದಾರೆ. ಅದಕ್ಕೆ ಆ ಉದ್ಯೋಗಿ, ಇಲ್ಲದಿದ್ದರೆ ಏನಾಗುತ್ತದೆ ಎಂದು ಧೈರ್ಯ ತಂದುಕೊಂಡು ಪ್ರಶ್ನಿಸಿದ್ದಾರೆ. ಅದಕ್ಕೆ ದುಷ್ಕರ್ಮಿಗಳು, ‘ಏನು ಬೇಕಾದರೂ ಆಗಬಹುದು. ಒಂದು ವಾಹನ ನಿನ್ನ ಮೇಲೆ
ಹತ್ತಿ ಹೋಗಬಹುದು. ಇದು ನಮ್ಮ ಎಚ್ಚರಿಕೆ. ಹೇಳಿದಂತೆ ಮಾಡು’ ಎಂದು ಬೆದರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಸ್ಟೀಲ್ ಬ್ರಿಡ್ಜ್ ಅವ್ಯವಹಾರ ಹಾಗೂ ಬೆಂಗಳೂರಿನ ಕೆರೆಗಳ ಉಳಿವಿನ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಜನಾಂದೋಲನ ರೂಪಿಸುವಲ್ಲಿ ರಾಜೀವ್ ಚಂದ್ರಶೇಖರ್ ಸಾಮಾಜಿಕ ಜಾಲ ತಾಣ ತಂಡವು ಪ್ರಮುಖ ಪಾತ್ರ ವಹಿಸಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಭಾವಶಾಲಿಯಾಗಿದೆ. ಈ ಆಂದೋಲನ ತಡೆಯುವ ನಿಟ್ಟಿನಲ್ಲಿ ಬೆದರಿಕೆ ಹಾಕಿರಬಹುದು ಎಂಬ ಅನುಮಾನವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.