14 ದಿನದಲ್ಲಿ ಶಂಕರಮೂರ್ತಿ ಹುದ್ದೆ ಬಿಡದಿದ್ರೆ ಚುನಾವಣೆ: ಉಗ್ರಪ್ಪ ಎಚ್ಚರಿಕೆ

Published : Jun 03, 2017, 12:04 PM ISTUpdated : Apr 11, 2018, 12:44 PM IST
14 ದಿನದಲ್ಲಿ ಶಂಕರಮೂರ್ತಿ ಹುದ್ದೆ ಬಿಡದಿದ್ರೆ ಚುನಾವಣೆ: ಉಗ್ರಪ್ಪ ಎಚ್ಚರಿಕೆ

ಸಾರಾಂಶ

ಅವಿಶ್ವಾಸ ನಿರ್ಣಯಕ್ಕೆ ನೋಟಿಸ್‌ ನೀಡಿರುವ ಕಾರಣದಿಂದಲೇ ಎಂಟು ಮಂದಿ ವಿಧಾನ ಪರಿಷತ್‌ ಸದಸ್ಯರಿಗೆ ಸಭಾಪತಿಗಳು ಶಂಕರಮೂರ್ತಿ ನೋಟಿಸ್‌ ನೀಡಿದ್ದಾರೆ. ಆದರೆ ಶಾಸಕರ ಮತದಾ ನದ ಹಕ್ಕು ಮತ್ತು ಪ್ರಯಾಣ ಭತ್ಯೆಯಂತಹ ವಿಚಾರಗಳನ್ನು ಪ್ರಶ್ನಿಸಿ ಶಾಸಕರಿಗೆ ನೋಟಿಸ್‌ ನೀಡಲು ಸಭಾಪತಿಗಳಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಇಂತಹ ವಿಚಾರದಲ್ಲಿ ಕೇವಲ ನೀತಿ ನಿರೂಪಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭಾಪತಿಗಳು ಬಹುತೇಕ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ | ಅವಿಶ್ವಾಸ ಮಂಡನೆಗೆ ಕಾನೂನು ಪ್ರಕಾರವೇ ನೋಟಿಸ್‌: ಉಗ್ರಪ್ಪ

ಬೆಂಗಳೂರು: ‘ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ವಿಧಾನಪರಿಷತ್‌ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ ಅವರ ಪದಚ್ಯುತಿಗೆ ಕೋರಿ ನಾವು ನೋಟಿಸ್‌ ನೀಡಿದ್ದೇವೆ. 14 ದಿನಗಳ ಒಳಗಾಗಿ ಸಭಾಪತಿ ಶಂಕರಮೂರ್ತಿ ಅವರು ತಮ್ಮ ಸ್ಥಾನ ಬಿಡಬೇಕು. ಇಲ್ಲದಿದ್ದಲ್ಲಿ ಚುನಾವಣೆ ನಡೆಸಲಾಗುವುದು' ಎಂದು ಕಾಂಗ್ರೆಸ್‌'ನ ಹಿರಿಯ ಮೇಲ್ಮನೆ ಸದಸ್ಯ ವಿ.ಎಸ್‌. ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ತಿನಲ್ಲಿ ಸಭಾಪತಿಗಳು ಬಹುತೇಕ ಸದಸ್ಯರ ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಕಾನೂನು ಅನುಸಾರವೇ ನೋಟಿಸ್‌ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಅವಿಶ್ವಾಸ ನಿರ್ಣಯಕ್ಕೆ ನೋಟಿಸ್‌ ನೀಡಿರುವ ಕಾರಣದಿಂದಲೇ ಎಂಟು ಮಂದಿ ವಿಧಾನ ಪರಿಷತ್‌ ಸದಸ್ಯರಿಗೆ ಸಭಾಪತಿಗಳು ಶಂಕರಮೂರ್ತಿ ನೋಟಿಸ್‌ ನೀಡಿದ್ದಾರೆ. ಆದರೆ ಶಾಸಕರ ಮತದಾ ನದ ಹಕ್ಕು ಮತ್ತು ಪ್ರಯಾಣ ಭತ್ಯೆಯಂತಹ ವಿಚಾರಗಳನ್ನು ಪ್ರಶ್ನಿಸಿ ಶಾಸಕರಿಗೆ ನೋಟಿಸ್‌ ನೀಡಲು ಸಭಾಪತಿಗಳಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಇಂತಹ ವಿಚಾರದಲ್ಲಿ ಕೇವಲ ನೀತಿ ನಿರೂಪಣಾ ಸಮಿತಿಗೆ ದೂರು ಸಲ್ಲಿಸಬಹುದು ಎಂದು ಉಗ್ರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪದ್ಮನಾಭ ರೆಡ್ಡಿ ದೂರೇ ಅಕ್ರಮ: ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ದೂರು ಆಧರಿಸಿ ಸಭಾಪತಿಗಳು ನೋಟಿಸ್‌ ನೀಡಿದ್ದಾರೆ. ಆದರೆ ಪರಿಷತ್‌ ಸದಸ್ಯರು ಪ್ರಯಾಣ ಭತ್ಯೆ ಮತ್ತು ತುಟ್ಟಿಭತ್ಯೆ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆ. ನೋಟಿಸ್‌ ಪಡೆದಿರುವ ಎಲ್ಲ 8 ಶಾಸಕರು ಬಿಬಿಎಂಪಿ ಯಿಂದ ಟಿಎ-ಡಿಎ ಪಡೆದಿಲ್ಲ. ಹೀಗಾಗಿ ಪದ್ಮನಾಭ ರೆಡ್ಡಿ ದೂರು ವಿಚಾರಣೆಗೆ ಅರ್ಹವಲ್ಲ. ಆದಾಗ್ಯೂ ಸಭಾಪತಿಗಳು ನೋಟಿಸ್‌ ನೀಡಿರುವು ದರ ಹಿಂದಿನ ಉದ್ದೇಶ ಸರಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ನಡುವೆಯೇ ಎಂಟು ಜನ ಪರಿಷತ್‌ ಸದಸ್ಯರಿಗೆ ಬಿಬಿಎಂಪಿ ಮೇಯರ್‌ ಆಯ್ಕೆ ಚುನಾವಣೆ ಮತ್ತು ಆಯಾ ಶಾಸಕರು ತಮ್ಮ ಕ್ಷೇತ್ರದಲ್ಲಿ ಸೇರಿದಂತೆ ಒಟ್ಟು ಎರಡು ಕಡೆ ಮತದಾನ ಮಾಡಿದ್ದಾರೆ ಎಂದು ಸಭಾಪತಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಪ್ರಕಾರ ಮತದಾರರು ಮತಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು, ಅದನ್ನು ಬೇರೆಡೆ ಸ್ಥಳಾಂತರಿಸಿ ಕೊಳ್ಳಲು ಅವಕಾಶ ಇದ್ದೇ ಇದೆ. ಸಂವಿಧಾನದ ಪರಿಚ್ಛೇದ 73 ಮತ್ತು 74 ಪ್ರಕಾರ ರಾಜ್ಯಸಭಾ ಸದಸ್ಯರು ತಾವಿರುವ ಕ್ಷೇತ್ರದ ಮತದಾರರಾಗಿದ್ದರೂ ಎಲ್ಲಿ ಬೇಕಾದರೂ ಸ್ಪರ್ಧಿಸಲು ಹಾಗೂ ಮತ ಚಲಾ ವಣೆ ಮಾಡಲು ಅವಕಾಶ ಇದೆ. ಸ್ಪೀಕರ್‌ ಮತ್ತು ಸಭಾಪತಿ ಆದವರು ನಿಷ್ಪಪಕ್ಷಪಾತಿಗಳಾಗಿರಬೇಕು ಎಂದು ಹೇಳಿದರು.

ಸಂವಿಧಾನದ 10ನೇ ಪರಿಚ್ಛೇದದ ಉಪ ನಿಯಮ ಎ, ಬಿ ಮತ್ತು ಸಿ ಅನ್ವಯ ಸ್ಪೀಕರ್‌ ಅಥವಾ ಸಭಾಪತಿಗಳು ಒಂದು ವೇಳೆ ಸದಸ್ಯರು ವ್ಹಿಪ್‌ ಉಲ್ಲಂಘಿಸಿದರೆ, ವ್ಹಿಪ್‌ ಅನ್ವಯ ಮತ ಚಲಾವಣೆ ಮಾಡದಿದ್ದರೆ ಮತ್ತು ವ್ಹಿಪ್‌ ಉಲ್ಲಂಘಿಸಿ ಸದನಕ್ಕೆ ಗೈರು ಹಾಜರಾ ದರೆ ಮಾತ್ರ ಸದಸ್ಯತ್ವ ರದ್ದುಪಡಿಸಲು ಅವಕಾಶ ಇದೆ. ಈ ಮೂರು ಕಾರಣಗಳನ್ನು ಬಿಟ್ಟು ಬೇರಾವ ಕಾರಣಕ್ಕೂ ಸದಸ್ಯತ್ವ ರದ್ದುಪಡಿಸಲು ಅವಕಾಶ ಇಲ್ಲ ಎಂದು ತಿಳಿಸಿದರು.

ಆದರೆ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ನೀಡಿದ ದೂರನ್ನೇ ನೆಪವಾಗಿಟ್ಟುಕೊಂಡು ಸಭಾಪತಿಗಳು ನೋಟಿಸ್‌ ನೀಡಬಾರದಿತ್ತು. ಬದಲಾಗಿ ಸದಸ್ಯರ ವಿರುದ್ಧ ದೂರು ಬಂದಲ್ಲಿ ಸಭಾಪತಿಗಳು ನೀತಿ ನಿರೂಪಣಾ ಸಮಿತಿಗೆ ದೂರು ದಾಖಲಿಸಬೇಕು. ಈ ವಿಚಾರದಲ್ಲಿ ರಹಸ್ಯಕೂಡ ಕಾಪಾಡಿಕೊಳ್ಳಬೇಕು. ಈ ವಿಚಾರವನ್ನು ಸಭಾಪತಿ ಗಳು ಬಹಿರಂಗಪಡಿಸುವಂತಿಲ್ಲ. ಪರಿಶೀಲನಾ ವಿಷಯವನ್ನು ಸಭಾಪತಿಗಳು ಎಲ್ಲಿಯೂ ಪ್ರಸ್ತಾಪಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಸಭಾಪತಿ ಗಳು ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಮೂಲಕ ಸದನದ ಹಕ್ಕು ಮತ್ತು ಗೌರವಕ್ಕೆ ಸಭಾಪತಿ ಧಕ್ಕೆ ತಂದಿದ್ದಾರೆ. ಈ ತಪ್ಪನ್ನು ಸಭಾಪತಿಗಳು ತಿದ್ದಿಕೊಳ್ಳಬೇಕು. ಯಾವ ಶಾಸಕರೂ ತಪ್ಪು ಮಾಡಿಲ್ಲ. ಇದನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ