
ದುಬೈ(ಜೂ.06): 2022ಕ್ಕೆ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯ ವಹಿಸಿರುವ, ಅನಿಲ ಸಂಪದ್ಭರಿತ ದೇಶ ಕತಾರ್ ಜತೆಗೆ ಸೌದಿ ಅರೇಬಿಯಾ ಸೇರಿ ಏಳು ದೇಶಗಳು ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಸೋಮವಾರ ಬೆಳಗ್ಗೆ ಕಡಿದುಕೊಂಡಿವೆ. ವಾಯು ಹಾಗೂ ಸಮುದ್ರ ಮಾರ್ಗವನ್ನೂ ಬಂದ್ ಮಾಡುವುದಾಗಿ ಘೋಷಿಸಿವೆ.
ಸೌದಿ ಅರೇಬಿಯಾದ ಶತ್ರು ದೇಶ ಇರಾನ್ ಜತೆ ಕತಾರ್ ಉತ್ತಮ ಬಾಂಧವ್ಯ ಹೊಂದಿರುವುದು ಹಾಗೂ ಐಸಿಸ್, ಮುಸ್ಲಿಂ ಬ್ರದರ್ಹುಡ್ನಂತಹ ಇಸ್ಲಾಮಿಕ್ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ, ಬಹ್ರೇನ್, ಈಜಿಪ್ಟ್, ಯೆಮನ್, ಲಿಬಿಯಾ, ಮಾಲ್ಡೀವ್್ಸ, ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ತೆಗೆದುಕೊಂಡಿರುವ ಈ ನಿರ್ಧಾರ, ಕೊಲ್ಲಿ ದೇಶಗಳ ನಡುವಣ ಬಿಕ್ಕಟ್ಟನ್ನು ಮತ್ತಷ್ಟುಹೆಚ್ಚಿಸಿದೆ.
ಕತಾರ್ನಿಂದ ರಾಜತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಕೊಳ್ಳುವುದಾಗಿ ಏಳು ದೇಶಗಳೂ ಹೇಳಿವೆ. ಅಲ್ಲದೆ ನಾಲ್ಕೂ ದೇಶಗಳಲ್ಲಿರುವ ಕತಾರ್ ರಾಯಭಾರಿಗಳನ್ನು ಹೊರಗಟ್ಟುವುದಾಗಿ ಘೋಷಿಸಿವೆ. ಈ ಬಗ್ಗೆ ಕತಾರ್ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕತಾರ್ ಜತೆಗೆ ರಾಜತಾಂತ್ರಿಕ ಸಂಬಂಧ ಮಾತ್ರವೇ ಅಲ್ಲದೆ ವಾಯು ಹಾಗೂ ಸಮುದ್ರ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ ಎಂದು ಏಳೂ ದೇಶಗಳೂ ತಿಳಿಸಿವೆ. ಕತಾರ್ ಜತೆಗಿನ ಭೂ ಗಡಿಯನ್ನು ಮುಚ್ಚುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ.
ಕಾರಣವೇನು?:
ಪ್ರಾದೇಶಿಕ ಸ್ಥಿರತೆ ಇರಾನ್ ಅಪಾಯ ಕಾರಿಯಾಗಿದೆ ಎಂದು ವಾದಿಸುವ ಸೌದಿ ಅರೇಬಿಯಾ, ಆ ದೇಶದ ಜತೆ ತನ್ನ ಮಿತ್ರ ರಾಷ್ಟ್ರಗಳು ಸಂಬಂಧ ಹೊಂದುವುದನ್ನು ಸಹಿಸುವುದಿಲ್ಲ. ಇದು ಗೊತ್ತಿದ್ದರೂ ಇರಾನ್ ಅಧ್ಯಕ್ಷರಾಗಿ ಪುನಾರಾಯ್ಕೆಯಾದ ಹಸನ್ ರೌಹಾನಿ ಅವರಿಗೆ ಮೇ 27ರಂದು ಕರೆ ಮಾಡಿ ಕತಾರ್ನ ಎಮೀರ್ ಅಭಿನಂದನೆ ಸಲ್ಲಿಸಿದ್ದರು.
ಬಿಕ್ಕಟ್ಟು ಆಂತರಿಕ ವಿಷಯ: ಅರೇಬಿಯಾ ದೇಶಗಳು ಕತಾರ್ ಜೊತೆಗಿನ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿರುವುದು ಆ ದೇಶಗಳ ಆಂತರಿಕ ವಿಷಯ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯ ಪಟ್ಟಿದ್ದಾರೆ. ‘ಅಲ್ಲಿರುವ ಭಾರತೀಯರ ಬಗ್ಗೆ ಮಾತ್ರ ನಮ್ಮ ಕಾಳಜಿ. ಯಾರಾದರೂ ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದಾರೆಯೇ? ಎಂದು ನಾವು ಖಚಿತ ಪಡಿಸಿಕೊಳ್ಳುತ್ತಿದ್ದೇವೆ' ಎಂದು ಸುಷ್ಮಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.