
ಬೆಂಗಳೂರು(ಜೂ.06): ರಾಜ್ಯವನ್ನೇ ಬೆಚ್ಚಿ ಬೀಳಿಸುವ ರಾಜ್ಯದ ಅತಿದೊಡ್ಡ ಟೆಲಿಫೋನ್ ಕದ್ದಾಲಿಕೆ ಪ್ರಕರಣವೀಗ ಬೆಳಕಿಗೆ ಬಂದಿದೆ. ಓರ್ವ IPS ಅಧಿಕಾರಿ ಮತ್ತೊಬ್ಬ IPS ಅಧಿಕಾರಿಯ ಫೋನ್ ಸಂಭಾಷಣೆಯ ಕದ್ದಾಲಿಕೆ ಮಾಡಿರುವ ಪ್ರಕರೆಣ ಇದಾಗಿದೆ. ಈ ಟೆಲಿಫೋನ್ ಸಂಭಾಷಣೆಯಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಕನ್ನಡ ಪರ ಕಾರ್ಯಕರ್ತನೊಂದಿಗೆ ನಡೆಸಿದ ಮಾತುಕತೆ ಇದೆ ಎಂಬುವುದಾಗಿ ತಿಳಿದು ಬಂದಿದೆ.
ಐಪಿಎಸ್ ಅಧಿಕಾರಿಗಳ ಒಳಜಗಳದಿಂದ ಪೊಲೀಸ್ ಇಲಾಖೆಯೇ ತಲೆತಗ್ಗಿಸುವ ಪ್ರಕರಣ ನಡೆದಿದ್ದು, ಇತ್ತ ಕನ್ನಡಪರ ಸಂಘಟನೆಗಳಿಗೂ ಈ ಸುದ್ದಿ ಶಾಕ್ ನೀಡಿದಂತಿದೆ. ಐಪಿಎಸ್ ಅಧಿಕಾರಿ ಕನ್ನಡಪರ ಕಾರ್ಯಕರ್ತನೊಂದಿಗೆ ಸಂಭಾಷಣೆ ನಡೆಸುತ್ತಿದ್ದ ವೇಳೆ ಮತ್ತೊಬ್ಬ ಅಧಿಕಾರಿ ಅವರ ಫೋನನ್ನು ಟ್ಯಾಪ್ ಮಾಡಿದ್ದು, ಆ ಸಂಭಾಷಣೆಯ ಆಡಿಯೋವನ್ನು ಸೋರಿಕೆ ಮಾಡಿರುವುದಾಗಿಯೂ ತಿಳಿದು ಬಂದಿದೆ.
ಕಾವೇರಿ ಗಲಭೆಯ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ಹಾಗೂ ಕನ್ನಡ ಪ್ರಕಾಶ್'ರವರು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ನಡುವೆ ಫೋನ್ ಸಂಭಾಷಣೆ ನಡೆದಿತ್ತು. ಆದರೆ ಅವರ ಫೋನ್'ನ್ನು ಟ್ಯಾಪ್ ಮಾಡಿಸಿದ್ದ ಡಿಸಿಪಿ ಅಜಯ್ ಹಿಲೋರಿ ಬಳಿಕ ಈ ಸಂಭಾಷಣೆಯನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ.
ಈ ಫೋನ್ ಕದ್ದಾಲಿಕೆ ಕುರಿತಾಗಿ ಚರಣ್ ರೆಡ್ಡಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಹೀಗಾಗಿ ಇದರ ಕುರಿತು ವಿಚಾರಣೆ ನಡೆಸುವಂತೆ ಡಿಜಿಪಿ ಆರ್. ಕೆ ದತ್ತಾ ಪೊಲೀಸ್ ಆಯುಕ್ತರಿಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದಾರೆ. ಹೀಗಿದ್ದರೂ ಆಯುಕ್ತ ಪ್ರವೀಣ್ ಸೂದ್ ಯಾವುದೇ ತನಿಖೆ ಆರಂಭಿಸಿಲ್ಲ. ಇವರ ಈ ನಡೆಯಿಂದ ಫೋನ್ ಕದ್ದಾಲಿಕೆ ನಡೆಸಿದ ಡಿಸಿಪಿ ಅಜಯ್ ಹಿಲೋರಿಗೆ ಆಯುಕ್ತ ಪ್ರವೀಣ್ ಸೂದ್ ರಕ್ಷಣೆ ನೀಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅಲ್ಲದೇ ಐಪಿಎಸ್ ಅಧಿಕಾರಿಗಳ ನಡುವಿನ ಕಿತ್ತಾಟದಿಂದ ಕನ್ನಡ ಸಂಘಟನೆಗಳ ಮಾನ ಹರಾಜಾಗಿರುವುದೂ ನಿಜ.
ಇದಕ್ಕೆ ಸಂಬಂಧಿಸಿದ ಎಕ್ಸ್'ಕ್ಲೂಸಿವ್ ಮಾಹಿತಿಗಳು ಸುವರ್ಣ ನ್ಯೂಸ್'ಗೆ ಲಭ್ಯವಾಗಿದ್ದು, ದಾಖಲೆಗಳೂ ಲಭ್ಯವಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.