
ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಲ್ಲಿ ಒಬ್ಬರಾದ ಖ್ಯಾತ ನಟ ಪ್ರಕಾಶ್ ರೈ, ಗುರುವಾರ ಇಲ್ಲಿ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದ್ದಾರೆ.
ರಾವ್ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ತೃತೀಯ ರಂಗ ರಚನೆಗೆ ಪ್ರಕ್ರಿಯೆ ಆರಂಭಿಸಿರುವ ಬೆನ್ನಲ್ಲೇ ನಡೆದಿರುವ ಈ ಭೇಟಿ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ರಾವ್ ಅವರನ್ನು ಅವರ ಮನೆಯಲ್ಲಿಯೇ ಭೇಟಿ ಕೆಲ ಕಾಲ ಮಾತುಕತೆ ನಡೆಸಿದ ರೈ, ನಂತರ ಸಿಎಂ ವಾಹನದಲ್ಲೇ ವಿಧಾನಸೌಧಕ್ಕೂ ತೆರಳಿದರು. ನಟ ಪ್ರಕಾಶ್ ರೈ ಅವರ ಈ ನಡೆ ಅವರ ರಾಜಕೀಯ ಪ್ರವೇಶಕ್ಕೆ ಮೊದಲ ಹೆಜ್ಜೆ ಇರಬಹುದು ಎಂಬ ವಾದಗಳು ಕೇಳಿಬಂದಿದೆ.
ಈ ಭೇಟಿ ವೇಳೆ ಉಭಯ ನಾಯಕರು, ದೇಶದಲ್ಲಿನ ಪ್ರಸ್ತಕ ರಾಜಕೀಯ ಸ್ಥಿತಿ ಮತ್ತು ತೃತೀಯ ರಂಗ ರಚನೆಯ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಪ್ರಕಾಶ್ ರೈ, ದಕ್ಷಿಣ ಭಾರತ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟುಪ್ರಭಾವ ಹೊಂದಿರುವ ನಟ. ಹೀಗಾಗಿ ಅವರು ಬಿಜೆಪಿ - ಕಾಂಗ್ರೆಸ್ ಹೊರತಾದ ತೃತೀಯ ರಂಗ ರಚನೆಯಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ ನಾಯಕರ ಜೊತೆ ಮಾತುಕತೆ ನಡೆಸುವ ಮೂಲಕ ಮುಂಚೂಣಿ ಪಾತ್ರ ವಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಕಾಶ್ ರೈ ಅವರ ಭೇಟಿಯ 1 ದಿವಸ ಮುನ್ನ ಕೆಸಿಆರ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ ಮುಖಂಡ ಹೇಮಂತ್ ಸೊರೇನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಕೆಸಿಆರ್ ಅವರು ತೃತೀಯ ರಂಗ ರಚನೆ ಯತ್ನಕ್ಕೆ ಚಾಲನೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.