ಮುಂಗಡಪತ್ರದಲ್ಲಿ ಘೋಷಿಸಲಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 6 ಸಾವಿರ ರುಪಾಯಿ ಹಣ ಪಡೆಯಲು ಕೆಲವು ನೀತಿ ನಿಯಮ ರೂಪಿಸಲಾಗಿದ್ದು, ಯಾರು ಅರ್ಹರು ಎನ್ನುವ ಮಾಹಿತಿ ಇಲ್ಲಿದೆ.
ನವದೆಹಲಿ: ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ ಶಾಸಕರು, ಮಂತ್ರಿಗಳು- ಇವರಿಗೆ ಮುಂಗಡಪತ್ರದಲ್ಲಿ ಘೋಷಿಸಲಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 6 ಸಾವಿರ ರುಪಾಯಿ ಪರಿಹಾರ ಸಿಗದು.
ಅಂತೆಯೇ ವೈದ್ಯರು, ಎಂಜಿನಿಯರುಗಳು, ವಕೀಲರು, ಲೆಕ್ಕ ಪರಿಶೋಧಕರು, ವೃತ್ತಿಪರ ಸಂಸ್ಥೆಗಳ ಜತೆ ನೋಂದಾಯಿಸಿಕೊಂಡಿರುವ ವಾಸ್ತುಶಿಲ್ಪಿಗಳು ಹಾಗೂ ಅವರ ಕುಟುಂಬದವರಿಗೂ ಈ ಯೋಜನೆಯ ಪ್ರಯೋಜನ ಲಭಿಸದು.
5 ಎಕರೆವರೆಗೆ ಜಮೀನು ಹೊಂದಿದ ರೈತರಿಗೆ ವಾರ್ಷಿಕ 6 ಸಾವಿರ ರುಪಾಯಿ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಇದರ ಮಾರ್ಗಸೂಚಿ ಗಳನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳಿವೆ.
ಮಾರ್ಗಸೂಚಿಗಳು
ಪತಿ, ಪತ್ನಿ ಅಥವಾ ಅಪ್ರಾಪ್ತ ಮಕ್ಕಳನ್ನು ಒಳಗೊಂಡ ಒಟ್ಟಾರೆ 5 ಎಕರೆವರೆಗೆ ಜಮೀನು ಹೊಂದಿದ ಕುಟುಂಬವು ಯೋಜನೆಗೆ ಅರ್ಹ.
ಸರ್ಕಾರಿ ನೌಕರರು ಅಥವಾ ಪಿಂಚಣಿದಾರರಾಗಿದ್ದರೂ ಗ್ರೂಪ್ ಡಿ ಅಥವಾ 4 ನೇ ದರ್ಜೆಯ ನೌಕರನಾಗಿದ್ದರೆ ಅಂಥ ವ್ಯಕ್ತಿಗಳು ಅರ್ಹ.
ಪಿಂಚಣಿದಾರರು 10 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿದರೆ (ಡಿ ಗ್ರೂಪ್ ಅಥವಾ ಕ್ಲಾಸ್- 4 ಉದ್ಯೋಗಿಗಳನ್ನು ಹೊರತುಪಡಿಸಿ) ಅರ್ಹರಲ್ಲ.
ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ಶಾಸಕರು, ಮಂತ್ರಿಗಳು, ಮಾಜಿ ಮಂತ್ರಿಗಳಿಗೆ ಅನ್ವಯವಿಲ್ಲ
ವೃತ್ತಿಪರ ವರ್ಗಕ್ಕೆ ಸೇರಿದ ವೈದ್ಯರು, ಎಂಜಿನಿಯರುಗಳು, ವಕೀಲರು, ಲೆಕ್ಕ ಪರಿಶೋಧ ಕರು, ವೃತ್ತಿಪರ ಸಂಸ್ಥೆಗಳ ಜತೆ ನೋಂದಾಯಿಸಿ ಕೊಂಡಿರುವ ವಾಸ್ತುಶಿಲ್ಪಿಗಳು ಹಾಗೂ ಅವರ ಕುಟುಂಬದವರಿಗೂ ಪ್ರಯೋಜನ ಲಭಿಸದು
ಫಲಾನುಭವಿಗಳಿಂದ ಸ್ವಯಂ ದೃಢೀಕರಣ ಪಡೆದುಕೊಂಡು ನೈಜ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸಬಹುದು
ಫಲಾನುಭವಿ ವ್ಯಕ್ತಿ ಲಭ್ಯವಾಗದೇ ಹೋದರೆ ಆತನ ಕುಟುಂಬದ ಹಿರಿಯ ವ್ಯಕ್ತಿಗೆ ಹಣ ವರ್ಗಾಯಿಸಬಹುದು
ಒಂದು ವೇಳೆ ಸ್ವಯಂ ದೃಢೀಕರಣ ತಪ್ಪಾಗಿದ್ದರೆ ಫಲಾನುಭವಿಯ ಖಾತೆಗೆ ಹಾಕಲಾಗಿದ್ದ ಹಣ ವಾಪಸು ಪಡೆದು, ಆತನಿಗೆ ದಂಡ ವಿಧಿಸಲಾಗುತ್ತದೆ.
ಇದೇ ಮಾರ್ಚ್ 31 ರ ಒಳಗೆ ಮೊದಲ ಕಂತಿನ ಹಣ (2000 ರು.) ವರ್ಗಾವಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ