ಎಲೆಕ್ಟ್ರಿಕ್‌ ಬಸ್‌ಗೆ ಮುಳುವಾದ ಬಿಎಂಟಿಸಿ ವಿಳಂಬ ಧೋರಣೆ

Published : Mar 13, 2019, 11:06 AM IST
ಎಲೆಕ್ಟ್ರಿಕ್‌ ಬಸ್‌ಗೆ ಮುಳುವಾದ ಬಿಎಂಟಿಸಿ ವಿಳಂಬ ಧೋರಣೆ

ಸಾರಾಂಶ

ಎಲೆಕ್ಟ್ರಿಕ್‌ ಬಸ್‌ಗೆ ಮುಳುವಾದ ವಿಳಂಬ ಧೋರಣೆ | ನಿಗದಿತ ಅವಧಿಯೊಳಗೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಬಿಎಂಟಿಸಿ ವಿಫಲ | 80 ಕೋಟಿಯನ್ನು ಬಡ್ಡಿಸಹಿತ ಹಿಂದಿರುಗಿಸುವಂತೆ ಪತ್ರಬರೆದ ಕೇಂದ್ರ  

ಬೆಂಗಳೂರು (ಮಾ. 13): ಎಲೆಕ್ಟ್ರಿಕ್‌ ಬಸ್‌ ವಿಚಾರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ತೋರಿದ ವಿಳಂಬ ಧೋರಣೆ ಇದೀಗ ಅದಕ್ಕೆ ಮುಳುವಾಗಿದೆ. ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸು ಸದ್ಯಕ್ಕಂತೂ ಈಡೇರುವ ಲಕ್ಷಣ ಕ್ಷೀಣಿಸಿದೆ.

ಬಿಎಂಟಿಸಿ ನಿಗದಿತ ಅವಧಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದರಿಂದ ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಫೇಮ್‌ ಯೋಜನೆಯಡಿ 80 ಕೋಟಿ ರು. ಸಹಾಯಧನ ಬಳಸಲು ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲವೆಂದು ರಾಜ್ಯ ಕೈಗಾರಿಕಾ ಅಭಿವೃದ್ಧಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ.

ಜೊತೆಗೆ ಬಿಎಂಟಿಸಿಗೆ 80 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಈ ಹಿಂದೆ ಫೇಮ್‌ ಯೋಜನೆಯಡಿ ಮೊದಲ ಹಂತದಲ್ಲಿ ನೀಡಿದ್ದ ಶೇ.20ರಷ್ಟು ಪ್ರೋತ್ಸಾಹಧನ (14.95 ಕೋಟಿ ರು.) ಹಾಗೂ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ನೀಡಲಾಗಿದ್ದ ಶೇ.50ರಷ್ಟುಪ್ರೋತ್ಸಾಹಧನ (3.73 ಕೋಟಿ ರು.)ಹಣವನ್ನು ಕೂಡಲೇ ಬಡ್ಡಿ ಸಹಿತ ಹಿಂದಿರುಗಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದೆ.

ಫೇಮ್‌ ಯೋಜನೆ ಮೊದಲ ಹಂತ 2019ರ ಮಾಚ್‌ರ್‍ಗೆ ಕೊನೆಗೊಳ್ಳಲಿದೆ. ಹಾಗಾಗಿ ಫೆ.28ರೊಳಗೆ ಎಲೆಕ್ಟ್ರಿಕ್‌ ಬಸ್‌ ಪೂರೈಸುವ ಬಿಡ್ಡರ್‌ಗೆ ಬಸ್‌ ಪೂರೈಸಲು ಕಾರ್ಯಾದೇಶ ನೀಡುವಂತೆ ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಫೆಬ್ರವರಿ ಮೊದಲ ವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.

ಈ ನಡುವೆ ಬಿಎಂಟಿಸಿ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಯೋಜನೆ ರದ್ದುಗೊಳಿಸಿ, ನಿಗಮದಿಂದಲೇ ಬಸ್‌ ಖರೀದಿಸಲು ಮಂಡಳಿ ಸಭೆಯಲ್ಲಿ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಫೇಮ್‌ ಯೋಜನೆಯ ಸಹಾಯಧನ ಬಳಕೆಗೆ ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ ಇಲಾಖೆಗೆ ಪತ್ರ ಬರೆದಿತ್ತು.

ಇದೀಗ ಬೃಹತ್‌ ಕೈಗಾರಿಕಾ ಇಲಾಖೆ, ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಈಗಾಗಲೇ ನೀಡಿರುವ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಮತ್ತೊಂದು ಪತ್ರ ಬರೆದಿದೆ.

ಏನಿದು ಫೇಮ್‌ ?

ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಖರೀದಿಸುವ ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಹಾಯಧನ ನೀಡಲು ಫಾಸ್ಟರ್‌ ಅಡೋಪ್ಷನ್‌ ಆ್ಯಂಡ್‌ ಮ್ಯಾನೂಫಾಕ್ಚರಿಂಗ್‌ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌(ಫೇಮ್‌)ಯೋಜನೆ ರೂಪಿಸಿದೆ.

ಈ ಯೋಜನೆಯಡಿ ಪ್ರತಿ ಎಲೆಕ್ಟ್ರಿಕ್‌ ಬಸ್‌ನ ದರದ ಶೇ.60ರಷ್ಟುಅಥವಾ ಗರಿಷ್ಠ ಒಂದು ಕೋಟಿ ರು. ಸಹಾಯಧನ ನೀಡಲಿದೆ. ಬಿಎಂಟಿಸಿಯು ಈ ಯೋಜನೆಯ ಮೊದಲ ಹಂತದಲ್ಲಿ ಸಹಾಯ ಧನಕ್ಕೆ ಮನವಿ ಮಾಡಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!