
ನವದೆಹಲಿ(ಆ.17): ಸಬ್ಸಿಡಿ ಹೊರೆ ಕಡಿದುಕೊಳ್ಳಲು ನಾನಾ ಮಾರ್ಗ ಅನುಸರಿಸುತ್ತಿರುವ ಕೇಂದ್ರ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ನಿತ್ಯ ಪರಿಷ್ಕರಣೆ ಮಾಡುವ ನಿರ್ಧಾರಕ್ಕೆ ಬಂದು ಇದೀಗ ಎರಡು ತಿಂಗಳು ಕಳೆದಿವೆ. ಆದರೆ, ಎರಡು ತಿಂಗಳ ಹಿಂದಿನ ದರಕ್ಕೆ ಹೋಲಿಸಿದರೆ ಹೆಚ್ಚೇನೂ ದರ ವ್ಯತ್ಯಾಸವಾಗಿಲ್ಲವಾದರೂ, ಪ್ರತಿನಿತ್ಯ ದರ ಪರಿಷ್ಕರಣೆಯಿಂದಾಗಿ ಜನರಿಗೆ ಬೆಲೆ ಇಳಿದ ದ್ದಾಗಲೀ, ಏರಿದ್ದಾಗಲೀ ಅರಿವಿಗೇ ಬರುತ್ತಿಲ್ಲ.
ಇದಕ್ಕೊಂದು ನಿದರ್ಶನ ಎಂದರೆ, ಕಳೆದ 1 ತಿಂಗಳಲ್ಲಿ ಪೆಟ್ರೋಲ್ ಬೆಲೆ ಲೀ.ಗೆ 4 ರು. ಹೆಚ್ಚಳವಾಗಿದ್ದರೆ, ಡೀಸೆಲ್ ಬೆಲೆ 3 ರು. ಏರಿಕೆಯಾಗಿದೆ. ಒಂದೆರಡು ರುಪಾಯಿ ಏರಿಳಿಕೆಯಾಗಿದ್ದರೂ ತೈಲೋತ್ಪನ್ನ ದರ ಪರಿಷ್ಕರಣೆ ಹಿಂದೆಲ್ಲ ದೊಡ್ಡ ಸುದ್ದಿಯಾಗುತ್ತಿತ್ತು.
ಇದೀಗ ತಿಂಗಳಲ್ಲಿ 4 ರು.ನಷ್ಟು ಏರಿಕೆ ಆಗಿದ್ದರೂ ಸಾಮಾನ್ಯ ಜನರ ಅರಿವಿಗೇ ಬಂದಿಲ್ಲ. ಈ ಮೊದಲು ಸರ್ಕಾರಗಳು ಆಗೊಮ್ಮೆ ಈಗೊಮ್ಮೆ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡುತ್ತಿದ್ದವು. ಬಳಿಕ ತಿಂಗಳಿಗೊಮ್ಮೆ, ಆನಂತರ 15 ದಿನಕ್ಕೊಮ್ಮೆ ಬೆಲೆ ಏರಿಳಿಕೆ ಮಾಡುವ ಪದ್ಧತಿ ಜಾರಿಗೆ ಬಂದಿತು. ಹೀಗೆ ಬೆಲೆ ಏರಿಕೆಯಾದಾಗಲೆಲ್ಲಾ ವಿರೋಧ ಪಕ್ಷಗಳಿಂದ, ಜನ ಸಾಮಾನ್ಯರಿಂದ ಸರ್ಕಾರದ ವಿರುದ್ಧ ಪ್ರತಿ‘ಟನೆ ಬೆದರಿಕೆ ಕೇಳಿಬರುತ್ತಿತ್ತು. ಬೆಲೆ ಇಳಿಸುವಂತೆ ಆಗ್ರಹ ವ್ಯಕ್ತವಾಗುತ್ತಿತ್ತು. ಆದರೆ ಇದನ್ನು ತಡೆಯಲೆಂದೇ ಸರ್ಕಾರ ಅನುಸರಿಸಿದ ದೈನಂದಿನ ಬೆಲೆ ಏರಿಕೆ ತಂತ್ರ ಫಲ ಕೊಟ್ಟಿದ್ದು, ಇದೀಗ ಬೆಲೆ ಏರಿಕೆ ಅಥವಾ ಇಳಿಕೆ ಜನರ ಗಮನಕ್ಕೇ ಬರುತ್ತಿಲ್ಲ.
ಹೊಸ ನೀತಿ ಜಾರಿ ಬಳಿಕ ತೈಲೋತ್ಪನ್ನಗಳ ಬೆಲೆ ನಿತ್ಯ ಕೆಲವು ಪೈಸೆಗಳಷ್ಟು ಏರಿಳಿಕೆಯಾಗುತ್ತಿದೆ. ಆದರೆ ಈ ಏರಿಳಿಕೆ ಪ್ರಮಾಣ ತಿಂಗಳಲ್ಲಿ ಒಟ್ಟಾರೆ ಕೆಲವು ರುಪಾಯಿಗಳ ಮಟ್ಟ ತಲುಪಿರುತ್ತದೆ. ಉದಾಹರಣೆಗೆ ಬೆಂಗಳೂರಿನಲ್ಲಿ 2017ರ ಜುಲೈ 15ಕ್ಕೆ ಪೆಟ್ರೋಲ್ ಬೆಲೆ 65.20 ರು. ಇದ್ದರೆ, ಆಗಸ್ಟ್ 15ಕ್ಕೆ ಅದು 69.12 ರು. ತಲುಪಿದೆ. ಅಂದರೆ ತಿಂಗಳಲ್ಲಿ ಪೆಟ್ರೋಲ್ ಬೆಲೆ ಹೆಚ್ಚುಕಡಿಮೆ 4 ರು. ಏರಿಕೆಯಾದರೂ, ಯಾರದ್ದೂ ವಿರೋಧವೇ ಇಲ್ಲ. ಇನ್ನು ಡೀಸೆಲ್ ಬೆಲೆ ಕೂಡಾ ಅಷ್ಟೇ. ಕಳೆದ ಜುಲೈ 15ಕ್ಕೆ ಬೆಂಗಳೂರಿನಲ್ಲಿ 54.99 ರು. ಇದ್ದ ಬೆಲೆ ಆ.15ಕ್ಕೆ 57.37 ರು. ತಲುಪಿದೆ. ಅಂದರೆ 3ರು. ಏರಿಕೆಯಾಗಿದೆ. ಇದು ಕೂಡಾ ಜನಸಾಮಾನ್ಯರಿಗೆ ಅಷ್ಟಾಗಿ ಗಮನಕ್ಕೆ ಬಂದಿಲ್ಲ. ಇನ್ನು ವಿರೋಧ ಪಕ್ಷಗಳು ಕೂಡಾ ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದ ಕಾರಣ, ಬೆಲೆ ಏರಿಕೆ ಅನಿವಾರ್ಯವಾಗಿ ಜನರ ಹೆಗಲೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.