ವೆಂಟಿಲೇಟರ್‌ನಲ್ಲೇ ಶರವಣ ಭವನ ರಾಜಗೋಪಾಲ್ ಶರಣು!

By Web DeskFirst Published Jul 10, 2019, 7:43 AM IST
Highlights

ಅಪಹರಣ, ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ದಕ್ಷಿಣ ಭಾರತದ ಪ್ರಸಿದ್ಧ ‘ಶರವಣ ಭವನ’ ಹೋಟೆಲ್‌ಗಳ ಮಾಲೀಕ| ಕೃತಕ ಉಸಿರಾಟದಲ್ಲೇ ಶರವಣ ಭವನ ಮಾಲೀಕ ಮದ್ರಾಸ್‌ ಕೋರ್ಟ್‌ಗೆ ಶರಣು| 

ನವದೆಹಲಿ[ಜು.10]: 2001ರ ಅಪಹರಣ ಹಾಗೂ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ದಕ್ಷಿಣ ಭಾರತದ ಪ್ರಸಿದ್ಧ ‘ಶರವಣ ಭವನ’ ಹೋಟೆಲ್‌ಗಳ ಮಾಲೀಕ ರಾಜಗೋಪಾಲ್‌ ಮಂಗಳವಾರ ಮದ್ರಾಸ್‌ ಹೈಕೋರ್ಟ್‌ಗೆ ಹಾಜರಾದರು. ತಾನು ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಕಾರಣ ಜೀವಾವಧಿ ಶಿಕ್ಷೆ ಆರಂಭಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕೆಂಬ ಕೋರಿಕೆಯ ಅರ್ಜಿಯನ್ನು ಸುಪ್ರೀಂ ನಿರಾಕರಿಸಿದ ಬೆನ್ನಲ್ಲೇ, ರಾಜಗೋಪಾಲ್‌ ಆ್ಯಂಬುಲೆನ್ಸ್‌ ಮೂಲಕ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ನ್ಯಾಯಾಲಯಕ್ಕೆ ಶರಣಾದರು.

ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಅವನು(ರಾಜಗೋಪಾಲ್‌) ಅನಾರೋಗ್ಯಕ್ಕೀಡಾಗಿದ್ದರೆ, ಅವನ ಅನಾರೋಗ್ಯ ಸ್ಥಿತಿಯಲ್ಲಿ ಏಕೆ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ’ ಎಂದು ರಾಜಗೋಪಾಲ್‌ಗೆ ಚಾಟಿ ಬೀಸಿತ್ತು. 2001ರಲ್ಲಿ ತನ್ನ ಹೋಟೆಲ್‌ನಲ್ಲಿ ನೌಕರನಾಗಿದ್ದ ಶಾಂತಕುಮಾರ್‌ ಅವರ ಪತ್ನಿ ಜೊತೆ ಮೂರನೇ ವಿವಾಹವಾಗಲು ರಾಜಗೋಪಾಲ್‌ ಬಯಸಿದ್ದ. ಇದಕ್ಕೆ ಅಡ್ಡಿಯಾಗಿದ್ದ ಶಾಂತಕುಮಾರ್‌ನನ್ನು ಅಪಹರಣಗೈದು ಕೊಲೆಗೈಯ್ಯಲಾಗಿತ್ತು.

ಈ ಸಂಬಂಧ ತಪ್ಪಿತಸ್ಥನಾದ ರಾಜಗೋಪಾಲ್‌ ಹಾಗೂ ಇತರ 8 ಮಂದಿಗೆ ಸ್ಥಳೀಯ ನ್ಯಾಯಾಲಯ ವಿಧಿಸಿದ 10 ವರ್ಷ ಕಾರಾಗೃಹ ಶಿಕ್ಷೆಯನ್ನು 2009ರಲ್ಲಿ ಮದ್ರಾಸ್‌ ಹೈಕೋರ್ಟ್‌ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.

click me!