ಜಾತಿ ಅಂತಾ ಸಾಯ್ತಾರೆ: ತಾಯಿ ಹೆಣ ಸೈಕಲ್ ಮೇಲೆ ಕೊಂಡೊಯ್ದ ಮಗ!

By Web DeskFirst Published Jan 17, 2019, 2:40 PM IST
Highlights

ಜಾತಿ ವಿನಾಶ ಮಾಡದೇ ದೇಶದ ಉದ್ಧಾರ ಸಾಧ್ಯವಿಲ್ಲ| ಜಾತಿ ಎಂಬ ಪೆಡಂಭೂತ ಹೋಗಲಾಡಿಸಲು ಪಣ ತೊಡಿ| ಕೀಳು ಜಾತಿ ಎಂಬ ಕಾರಣಕ್ಕೆ ಶವ ಮುಟ್ಟದ ನೆರೆಹೊರೆಯವರು| ಏಕಾಂಗಿಯಾಗಿ ತಾಯಿಯ ಶವ ಸೈಕಲ್ ಮೇಲೆ ಕೊಂಡೊಯ್ದ ಮಗ| ಒಡಿಶಾದ ಕರ್ಪಬಲ್ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ  

ಭುವನೇಶ್ವರ್(ಜ.17): ‘ಕುಲ ಕುಲ ಕುಲವೆಂದು ಹೊಡೆದಾಡದಿರು ನಿನ್ನ ಕುಲದ ಮೂಲವೇನಾದರೂ ಬಲ್ಲೆಯಾ..’ ಎಂಬ ಸಂದೇಶವನ್ನು ಈ ದೇಶದ ಸಂತರು ಶತಶತಮಾನಗಳಿಂದ ಈ ದೇಶದಲ್ಲಿ ಸಾರುತ್ತಲೇ ಇದ್ದಾರೆ.

ಆದರೂ ಈ ಜಾತಿ ಎಂಬ ಪೆಡಂಭೂತ ನಮ್ಮ ದೇಶವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಜಾತಿ ವಿನಾಶವಾಗದೇ ಈ ದೇಶ ಉದ್ಧಾರ ಆಗೋದಿಲ್ಲ ಎಂಬ ಸತ್ಯವನ್ನು ನಮ್ಮ ಜನ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಜಾತಿ ಎಂಬ ಈ ಭೂತ ಅದ್ಹೇಗೆ ನಮ್ಮ ಸಮಾಜವನ್ನು ಕಿತ್ತು ತಿನ್ನುತ್ತಿದೆ ಎಂಬುದಕ್ಕೆ ಒಡಿಶಾದಲ್ಲಿ ನಡೆದ ಈ ಘಟನೆ ಜ್ವಲಂತ ಸಾಕ್ಷಿ. ಮೃತ ತಾಯಿಯ ಶವವನ್ನು ಮುಟ್ಟಲು ಯಾರೂ ಮುಂದೆ ಬರದ ಕಾರಣ ಮಗನೋರ್ವ ಆಕೆಯ ಶವವನ್ನು ಸೈಕಲ್ ಮೇಲೆ ಸ್ಮಶಾನಕ್ಕೆ ಕೊಂಡೊಯ್ದ ಘಟನೆ ನಡೆದಿದೆ.

ಇಲ್ಲಿನ ಕರ್ಪಬಲ್ ಎಂಬ ಗ್ರಾಮದ ಮಹಿಳೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಆಕೆಯ ಮಗ ಸರೋಜ್ ಆಕೆಯ ಶವವವನ್ನು ಸೈಕಲ್ ಮೇಲೆ ಸ್ಮಶಾನಕ್ಕೆ ಏಕಾಂಗಿಯಾಗಿ ಕೊಂಡೊಯ್ದಿದ್ದಾನೆ.

ಜಾನಕಿ ಮತ್ತು ಸರೋಜ್ ಕೀಳು ಜಾತಿಗೆ ಸೇರಿದ ಕಾರಣಕ್ಕೆ ನೆರೆಹೊರೆಯವರು ಆಕೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೇ ಆಕೆಯ ಶವವನ್ನು ಮುಟ್ಟಲೂ ನಿರಾಕರಿಸಿದ್ದಾರೆ.

ಇದರಿಂದ ಮನನೊಂದ ಸರೋಜ್, ಏಕಾಂಗಿಯಾಗಿ ತಾಯಿಯ ಶವವನ್ನು ಸೈಕಲ್ ಮೇಲೆ 4-5 ಕಿ.ಮೀ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಿದ್ದಾನೆ. ಜಾತಿ ಎಂಬ ಪೆಡಂಭೂತ ಇನ್ನೂ ಏನೇನು ಆಘಾತಗಳನ್ನು ಹೊತ್ತು ತರಲಿದೆಯೋ ಆ ಭಗವಂತನೇ ಬಲ್ಲ.

ಫೋಟೋ ಕೃಪೆ: ಇಂಡಿಯಾ ಟುಡೆ

click me!