
ಬೆಂಗಳೂರು (ಫೆ.15): ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಚುನಾವಣಾ ಹವಾ ಸೃಷ್ಟಿಸಲು ಮುಂದಾಗಿರುವ ಬಿಜೆಪಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರವಾಸ ಮುಗಿಸಿರುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ತನ್ನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಮೋದಿ ಹಾಗೂ ಅಮಿತ್ ಶಾ ರಾಜ್ಯ ಪ್ರವಾಸದ ಜತೆಗೆ ಕರಾವಳಿ ಭಾಗದಲ್ಲಿ ಮಾರ್ಚ್ 3 ರಿಂದ 6ವರೆಗೆ ಕುಶಾಲನಗರ ಹಾಗೂ ಅಂಕೋಲದಿಂದ ಏಕಕಾಲಕ್ಕೆ 'ಕರ್ನಾಟಕ ಸಂರಕ್ಷಣಾ ಯಾತ್ರೆ ' ಹೆಸರಿನಲ್ಲಿ ಪಾದಯಾತ್ರೆಯನ್ನೂ ಆಯೋಜಿಸಲಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸುರತ್ಕಲ್ನಲ್ಲಿ ಆಯೋಜಿಸಿರುವ ಭಾರಿ ಬಹಿರಂಗ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಚುನಾವಣಾ ದೃಷ್ಟಿಯಿಂದ ಪಕ್ಷವನ್ನು ಸಜ್ಜುಗೊಳಿಸುವ ಎಲ್ಲ ಪ್ರಯತ್ನಗಳು ಆರಂಭವಾಗಿದ್ದು, ಕರಾವಳಿ ಭಾಗದಲ್ಲಿ ನಡೆಯುವ ಪಾದಯಾತ್ರೆಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಯಾಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
19ಕ್ಕೆ ಮೈಸೂರಿಗೆ ಮೋದಿ
ಫೆ 19ರಂದು ಪ್ರಧಾನಿ ಮೋದಿ ಮೈಸೂರು ಹಾಗೂ ಶ್ರವಣಬೆಳಗೊಳಕ್ಕೆ ಭೇಟಿ ನೀಡಲಿದ್ದಾರೆ. ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಮಹಮಸ್ತಾಭಿಷೇಕದಲ್ಲಿ ಭಾಗವಹಿಸುವ ಜತೆಗೆ ಅದೇ ದಿನ ಮೈಸೂರಿನಲ್ಲಿ ನಾನಾ ಅಭಿವೃದ್ಧಿ ಕಾರ್ಯಕ್ರಗಳಿಗೆ ಅವರು ಚಾಲನೆ ನೀಡುವರು. ಮೈಸೂರಿನ ಹೈಟೆಕ್ ರೈಲ್ವೆ ನಿಲ್ದಾಣ, ಇಎಸ್ಐ ಆಸ್ಪತ್ರೆ ಉದ್ಘಾಟನೆ ಜತೆಗೆ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವರು. ಫೆ.18ರ ರಾತ್ರಿಯೇ ಮೈಸೂರಿಗೆ ಆಗಮಿಸುವ ಪ್ರಧಾನಿ ಅಲ್ಲಿಯೇ ವಾಸ್ತವ್ಯ ನಡೆಸುವರು.
ಫೆ 27ರಂದು ಪ್ರಧಾನಿ ನರೇಂದ್ರ ಮೋದಿ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ ಬೃಹತ್ ರೈತ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಅವರಿಗೆ ನೇಗಿಲುಕೊಟ್ಟು ರೈತ ಸಂಘಟನೆಯಲ್ಲಿ ಇನ್ನಷ್ಟು ಶ್ರಮ ವಹಿಸುವಂತೆ ಅವರು ಸಲಹೆ ನೀಡಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಅಮಿತ್ ಶಾ ಕಾರ್ಯಕ್ರಮ
ಫೆ 20 ರಿಂದ 25 ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದ ಕರಾವಳಿ ಭಾಗದಿಂದ ಕಲಬುರ್ಗಿಯವರೆಗೆ ಪಕ್ಷದ ನಾನಾ ಹಂತದ ಸಂಘಟನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಫೆ.19ರಂದೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ಅವರು, ಫೆ 20 ರಂದು ಬೆಳಗ್ಗೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವರು. ಬಳಿಕ ಕಾಟಿಪಾಳ್ಯದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಹಿಂದು ಕಾರ್ಯಕರ್ತ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿದ್ದು, ಮಧ್ಯಾಹ್ನ ಬಂಟ್ವಾಳದಲ್ಲಿರುವ ನವಶಕ್ತಿ ಸಮಾವೆಶ ಉದ್ಘಾಟಿಸುವರು. ನಂತರ ಉಡುಪಿಯಲ್ಲಿ ಸಾಯಂಕಾಲ 5 ಗಂಟೆಗೆ ಆಯೋಜಿಸಿರುವ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಫೆ. 21 ರಂದು ಉಡುಪಿಯ ಮಠಾಧೀಶರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, 11 ಗಂಟೆಗೆ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮಂಗಳೂರು ವಿಭಾಗೀಯ ಶಕ್ತಿಕೇಂದ್ರದ ಸಮಾವೇಶ ಉದ್ಘಾಟನೆ ಹಾಗೂ ಸೋಷಿಯಲ್ ಮೀಡಿಯಾ ಕಾರ್ಯಕರ್ತರ ಜತೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಕುಮಟಾದ ಪರೇಶ್ ಮೇಸ್ತಾ ಕುಟುಂಬಕ್ಕೆ ಭೇಟಿ ಮಾಡಿ ಅವರ ಕುಟುಂಬ ವರ್ಗಕ್ಕೆ ಸಾಂತ್ವ ನ ಹೇಳಲಿದ್ದು, ಕುಮಟಾ, ಭಟ್ಕಳ, ಅಂಕೋಲಾ ಭಾಗದ ನವಶಕ್ತಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡುವರು.
ಫೆ 22 ರಂದು ಹಾವೇರಿ, ಹುಬ್ಬಳ್ಳಿ, ಚಿಕ್ಕೋಡಿ ಭಾಗಕ್ಕೆ ಸೇರಿದ ಪರಿಶಿಷ್ಟ ಜಾತಿ ಸಮಾವೇಶವನ್ನು ಹಾವೇರಿಯಲ್ಲಿ ಉದ್ಘಾಟಿಸಲಿದ್ದು, ಫೆ. 24ರಂದು ರಾಯಚೂರು, ಕೊಪ್ಪಳ, ಗುಲ್ಬರ್ಗ, ಬೀದರ್ ಜಿಲ್ಲೆಗಳಿಗೆ ಸಂಬಂಧಪಟ್ಟ ಹಿಂದುಳಿದ ವರ್ಗದ ಬೃಹತ್ ಸಮಾವೇಶವನ್ನು ರಾಯಚೂರಿನಲ್ಲಿ ಉದ್ಘಾಟಿಸುವರು. ಫೆ 25ರಂದು ಮಲ್ಲಿಕಾರ್ಜುನ ಖರ್ಗೆ ಅವರ ಸ್ವಕ್ಷೇತ್ರವಾದ ಕಲ್ಬುರ್ಗಿಯಲ್ಲಿ ಪರಿಶಿಷ್ಟ ಪಂಗಡದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.