
ತುಮಕೂರು(ಅ.07): ಫ್ಯಾಕ್ಟರಿ ಕೆಲಸಕ್ಕೆ ಹೋಗುತಿದ್ದ ಹೆಣ್ಣುಮಕ್ಕಳು ಅನ್ಯಜಾತಿಯ ಯುವಕರನ್ನು ಪ್ರೀತಿ ಮಾಡಿದ್ದಾರೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಇಬ್ಬರು ಹೆಣ್ಣುಮಕ್ಕಳನ್ನು ಕಳೆದ 10 ವರ್ಷದಿಂದ ಗೃಹ ಬಂದನದಲ್ಲಿಟ್ಟಿದ್ದ ಪ್ರಕರಣ ತುಮಕೂರಲ್ಲಿ ಬೆಳಕಿಗೆ ಬಂದಿದೆ.
ಇವರಲ್ಲಿ ಒಬ್ಬಾಕೆ ಸಾವಿಗೀಡಾಗಿದ್ದು, ಮತ್ತೊಬ್ಬಳು ಪ್ರಾಣಕ್ಕೆ ಸಂಚಕಾರ ತಂದಿಟ್ಟ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತಿಪಟೂರು ತಾಲೂಕಿನ ಸಾರ್ಥಹಳ್ಳಿಯಲ್ಲಿ ಈ ಮನಕಲಕುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶಿವರಾಮಯ್ಯ ಎನ್ನುವವರ ಪತ್ನಿ ಗಂಗಮ್ಮಳೇ ತನ್ನ ಪ್ರತಿಷ್ಠೆಗೆ ಮಕ್ಕಳನ್ನು ಬಲಿಕೊಟ್ಟ ವೃದ್ದೆ.
ಶಿವರಾಮಯ್ಯ ಗಂಗಮ್ಮ ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಸೌಭಾಗ್ಯ ಮತ್ತು ಶ್ರೀ ಲಕ್ಷ್ಮೀ ಎಂಬ ಇಬ್ಬರು ಹೆಣ್ಣುಮಕ್ಕಳು. ಇವರಿಬ್ಬರು ಕೂಡಾ ಬಿಸ್ಕೆಟ್ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಕೂಡಾ ಬೇರೆ ಜಾತಿಯ ಯುವಕರನ್ನು ಪ್ರೀತಿಸುತಿದ್ದರು. ಈ ವಿಚಾರ ತಾಯಿ ಗಂಗಮ್ಮಳ ಕಿವಿಗೆ ಬಿದ್ದಿತ್ತು. ಅಂದಿನಿಂದ ಇಬ್ಬರನ್ನು ಗೃಹಬಂಧನದಲ್ಲಿರಿಸಿದ್ದಾಳೆ. ಮನೆಯಿಂದ ಹೊರಗೆ ಹೋಗದಂತೆ ಸರಪಳಿಯಿಂದ ಕೈಕಾಲು ಕಟ್ಟಿ ಕಾದು ಕುಳಿತಿದ್ದಾಳೆ.
ತಾಯಿಯ ಈ ನಿರ್ದಯಿ ನಡೆಯಿಂದಾಗಿ ನಿಧಾನವಾಗಿ ಇಬ್ಬರು ಮಕ್ಕಳು ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಓಡಾಡದೆ ಕೈಕಾಳುಗಳು ಸ್ಥಾದೀನ ಕಳೆದುಕೊಂಡಿದೆ. ಪರಿಣಾಮ ಕಳೆದ 20 ದಿನದ ಹಿಂದೆ ಸೌಭಾಗ್ಯ ಎಂಬ ಹಿರಿಯ ಮಗಳು ಸಾವನಪ್ಪಿದ್ದಾಳೆ. ಎರಡನೇ ಮಗಳು ಶ್ರೀ ಲಕ್ಷ್ಮೀ ಕೂಡಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಹಿರಿಯ ಮಗಳು ಸಾವನ್ನಪ್ಪಿದ ಬಳಿಕ ತನ್ನ ತಪ್ಪಿನ ಅರಿವಾದ ತಾಯಿ ಗಂಗಮ್ಮ ಹೆಣ್ಣುಮಕ್ಕಳಿಗೆ ಕಟ್ಟಿದ ಸರಪಳಿ ತೆಗೆದುಹಾಕಿದ್ದಾಳೆ ಎನ್ನಲಾಗಿದೆ.
ಸದಾ ಜಗಳಗಂಟಿಯಾದ ಗಂಗಮ್ಮಳಿಂದ ಬೆಸತ್ತ ಗಂಡ ಶಿವರಾಮಯ್ಯ ಶಿಕ್ಷಕ ವೃತ್ತಿ ಬಿಟ್ಟು ಬೀಕ್ಷೆ ಬೇಡುತಿದ್ದಾನೆ ಎನ್ನಲಾಗಿದೆ. ಇಷ್ಟಾದ್ರೂ ಗಂಗಮ್ಮ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಮಕ್ಕಳು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು ಅಂತಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.