
ಆತ ಮಹಾನ್ ಚಾಣಾಕ್ಷ. ಪ್ರತಿಯೊಂದು ಹೆಜ್ಜೆ ಇಡುವಾಗ್ಲೂ ತೂಗಿ ಅಳೆದು ನಿರ್ಧಾರ ತಗೊಳೋ ಚತುರ. ಹಾಗ್ ತಗೊಂಡ ನಿರ್ಧಾರವನ್ನ ಅಚ್ಚಕಟ್ಟಾಗಿ ಸಾಧಿಸಿ ತೋರಿಸೋ ಭಲೇ ಬುದ್ಧಿವಂತ. ಆತನ ರಾಜತಂತ್ರದ ಮುಂದೆ ಬೇರೆಲ್ಲರ ತಂತ್ರಗಳೂ, ಠುಸ್ ಪಟಾಕಿ. ಜನ ಆ ವ್ಯಕ್ತಿಯನ್ನ ಕರೆಯೋದೇ ಚಾಣಕ್ಯ ಅಂತ.
ಇವತ್ತು ಕರ್ನಾಟಕಕ್ಕೊಬ್ಬರು ರಾಜಕೀಯ ಮುತ್ಸದ್ದಿಯ ಆಗಮನವಾಗಿದೆ. ರಾಜ್ಯದ ಬಿಜೆಪಿ ಪಾಳಯಲ್ಲಿ ಎಲ್ಲಿಲ್ಲದ ಚುರುಕು ಬಂದ್ಬಿಟ್ಟಿದೆ. ಬಂದ ಆ ವ್ಯಕ್ತಿಯನ್ನ ಕಾಣೋದಕ್ಕೆ ಬಿಜೆಪಿ ನಾಯಕರೂ ಸಹ ಮುಗಿಬಿದ್ದು ಬರ್ತಿದ್ದಾರೆ. ಹೀಗೆ ಬಂದವರು ಮತ್ಯಾರೂ ಅಲ್ಲ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. 2014ರಲ್ಲಿ ಯಾರೂ ಊಹಿಸದ ರೀತಿಲಿ ಮೋದಿಜಿ ಪ್ರಧಾನಿ ಗದ್ದುಗೆ ಏರಿದರು. ಆ ಐತಿಹಾಸಿಕ ಗೆಲುವಿನ ಕಾರಣಕರ್ತ ಅನ್ನೋ ಕೀರ್ತಿ ನೇರವಾಗಿ ದಕ್ಕಿದ್ದು ಇದೇ ಅಮಿತ್ ಶಾ ಅವರಿಗೆ.
ಬೆಳದಿದ್ದೆಲ್ಲಾ ಮುಂಬೈ'ನಲ್ಲಿ
ಅಮಿತ್ ಶಾ ಅವ್ರ ಪೂರ್ತಿ ಹೆಸರು, ಅಮಿತ್ ಭಾಯಿ ಅನಿಲ್ ಚಂದ್ರ ಶಾ.. ಹುಟ್ಟಿದ್ದು ಅಕ್ಟೋಬರ್ 22 , 1964ರಂದು.. ಬೆಳದಿದ್ದೆಲ್ಲಾ ಮುಂಬೈನಲ್ಲಿ. ಇವರ ತಂದೆ ಅನಿಲ್ ಚಂದ್ರ ಶಾ, ಬ್ಯುಸಿನಸ್'ಮೆನ್ ಆಗಿದ್ರು. ಚಿಕ್ಕಂದಿನಿಂದಲೂ ತಂದೆಗೆ ನೆರವಾಗಿ ಬೆಳಿದಿದ್ದರು. ಪುಟ್ಟ ವಯಸ್ಸಿನಿಂದ್ಲೂ ದೇಶದ ಬಗ್ಗೆ ಅಪಾರ ಅಭಿಮಾನ ಪ್ರೇಮ. ಆ ಕಾರಣದಿಂದಲೇ ಏನೋ, ರಾಷ್ಟ್ರೀಯ ಸ್ವಯಂ ಸೇವಕಾ ದಳ ಸೇರಿದ್ರು. ನಂತರ ತಮ್ಮ ನಾಯಕತ್ವದ ಗುಣದಿಂದ್ಲೇ ಗುರ್ತಿಸಿಕೊಂಡಿದ್ದ ಅವರು ಬಿಜೆಪಿಗೆ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.
ಮೋದಿಜಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಅವರ ಬೆನ್ನೆಲುಬಾಗಿ ಇದ್ದದ್ದು ಅಮಿತ್ ಶಾ. ಮೋದಿಯವರ ಪ್ರತಿ ನಡೆಯೂ ಹೇಗಿರಬೇಕು ಅನ್ನೋದನ್ನ ಲೆಕ್ಕಾಚಾರ ಹಾಕಿ ನಿರ್ಧರಿಸುತ್ತಿದ್ದರು. ಯಾವಾಗ ನರೇಂದ್ರ ಮೋದಿ 2014ರ ಚುನಾವಣೆಯಲ್ಲಿ ಊಹೆಗೂ ಮೀರಿದ ಗೆಲುವು ಸಾಧಿಸಿದರೋ ಆ ಸಾಧನೆಯ ಸಕ್ಸಸ್ ಸೀಕ್ರೇಟ್ ಏನು ಅಂತ ಬೆನ್ನತ್ತಿ ಹೋದವರಿಗೆಗೆ ಉತ್ತರವಾಗಿ ಸಿಕ್ಕಿದ್ದು ಅಮಿತ್ ಶಾ ಅನ್ನೋ ಚಾಣಕ್ಯ.
ಇಬ್ಬರು ತಂತ್ರಗಾರಿಕೆಯಲ್ಲಿ ನಿಸ್ಸೀಮರು
ಅಮಿತ್ ಶಾ ಮತ್ತು ಮೋದಿಜಿ ತಂತ್ರಗಾರಿಕೆಲ್ಲಿ ನಿಸ್ಸೀಮರು. ಇವರ ಜೋಡಿ ಕೇವಲ ಬೇರೆ ಪಕ್ಷದವರನ್ನಷ್ಟೇ ಅಲ್ಲ, ಎಷ್ಟೋ ಸಲ ತಮ್ಮ ಪಕ್ಷದಲ್ಲಿದ್ದೋರಿಗೇನೇ ಶಾಕ್ ಕೊಟ್ಟ ಪ್ರಸಂಗಗಳಿವೆ. ಇತ್ತೀಚಿಗಷ್ಟೇ ನಡೆದ ಉತ್ತರಪ್ರದೇಶ ಸೇರಿದಂತೆ, ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ವೇಳೆ, ಅಭ್ಯರ್ಥಿಗಳ ಮತ್ತು ನಾಯಕತ್ವದ ಆಯ್ಕೆಯ ವಿಚಾರದಲ್ಲಿ ಭರ್ಜರಿ ರಣತಂತ್ರ ರೂಪಿಸಿದ್ದ ಮೋದಿ ಮತ್ತು ಶಾ ಜೋಡಿ ಸೈ ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಘಟಾನುಘಟಿಗಳ ಹೆಸರು ಕೇಳಿಬರ್ತಿತ್ತು. ಆದರೆ ರಾಮನಾಥ್ ಕೋವಿಂದ್ ಅವರನ್ನ ತನ್ನ ಅಭ್ಯರ್ಥಿಯೆಂದು ಘೋಷಿಸಿ ಬಿಟ್ಟರು ಮೋದಿಜಿ ಮತ್ತು ಅಮಿತ್ ಶಾ. ಸ್ವಪಕ್ಷೀಯರು, ಪರಪಕ್ಷದವ್ರು, ಎಲ್ಲರನ್ನೂ ಈ ನಿರ್ಣಯ ಚಕಿತಗೊಳಿಸಿದ್ದಂತೂ ಹೌದು.
ಹಲವು ಸಂಕಷ್ಟ'ಗಳನ್ನು ಗೆದ್ದರು
ಈ ಜೋಡಿಯ ನಿರ್ಣಯಗಳು ಇಂಥಾ ಅದೆಷ್ಟೋ ಶಾಕ್ ನೀಡಿರೋದನ್ನು ಯಾರೂ ಮರೆಯೋ ಹಾಗಿಲ್ಲ ಬಿಡಿ. ಮೋದಿ ಪ್ರಧಾನಮಂತ್ರಿಯಾದ್ಮೇಲೆ ಗುಜರಾತ್ ಬಿಜೆಪಿ ಘಟಕ ಒಡೆದ ಮನೆಯಾಗಿತ್ತು. ಅಆದ್ಮೇಲೆ ಆನಂದಿಬೆನ್ ಪಟೇಲ್ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಮೇಲೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆಗ ಅತ್ಯುತ್ತಮ ಆಡಳಿತಗಾರ ಅನ್ನೋ ಹೆಸರು ಪಡೆದಿದ್ದ ವಿಜಯ್ ರೂಪಾನಿ ಅವರನ್ನು ಸಿಎಂ ಆಗಿ ನೇಮಿಸಿದ್ದೂ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಜಾರ್ಖಂಡ್ ಅಸೆಂಬ್ಲಿ ಚುನಾವಣೆ ಗೆದ್ದ ನಂತರ ಪಕ್ಷದ ಹಿರಿಯ ಮುಖಂಡ್ ಅರ್ಜುನ್ ಮುಂಡಾ ಅವರನ್ನು ಸಿಎಂ ಮಾಡ್ತಾರೆ ಅಂತ ಎಲ್ಲರೂ ಲೆಕ್ಕಾಚಾರ ಹಾಕಿದರು. ಆದರೆ ರಘುಬರ್ ದಾಸ್ ಅವರನ್ನು ಸಿಎಂ ಆಗಿ ಪ್ರಕಟಿಸಿ ಮೋದಿ-ಶಾ ಜೋಡಿ ಎಲ್ಲರ ಕಲ್ಪನೆಯನ್ನೂ ಬುಡಮೇಲು ಮಾಡಿದರು.
ಮೋದಿಜಿ ಎಲ್ಲೆಲ್ಲಿ ತಮ್ಮ ವಿಜಯ ಪತಾಕೆ ಹಾರಿಸ್ಬೇಕು ಅಂದ್ಕೋತಾರೋ ಅಲ್ಲೆಲ್ಲಾ ಹೋಗಿ, ವೇದಿಕೆ ಸಿದ್ಧ ಮಾಡೋದು ಅಮಿತ್ ಶಾ. ಇವರ ಮಾಸ್ಟರ್ ಪ್ಲ್ಯಾನ್, ನಿರೀಕ್ಷೆಗೂ ಮೀರಿದ ಗೆಲುವು ತಂದುಕೊಡುತ್ತೆ ಅನ್ನೋದು ಬರ್ತಾ ಬರ್ತಾ ಅಕ್ಷರಶಃ ಸತ್ಯ ಆಗ್ತಿದೆ. ಬಹುತೇಕ ಅನೇಕ ಕಡೆಗಳಲ್ಲಿ ವಿಜಯ ಧ್ವಜ ಹಾರಿಸಿದ ಬಿಜೆಪಿಯ ಕಣ್ಣು ಈಗ ಬಿದ್ದಿರೋದು, ನಮ್ಮ ಕರ್ನಾಟಕದ ಮೇಲೆ.
ಕರ್ನಾಟಕದ ಮೇಲೆ ಕಣ್ಣು
ಇವತ್ತಿಂದ 3 ದಿನಗಳ ಕಾಲ ಅಮಿತ್ ಶಾ ಕರ್ನಾಟಕದಲ್ಲಿರ್ತಾರೆ. 25 ಕ್ಕೂ ಹೆಚ್ಚು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಾರೆ. ಅಮಿತ್ ಶಾ ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಪಕ್ಷವನ್ನು ಸಜ್ಜುಗೊಳಿಸೋಕೆ ಕಾರ್ಯತಂತ್ರ ರೂಪಿಸಿದ್ದಾರೆ. ಹೀಗಾಗಿಯೇ ವಿವಿಧ ಕ್ಷೇತ್ರಗಳ ಸಾಧಕರ ಜೊತೆಗೆ, ಗಣ್ಯರ ಜೊತೆಗೆ, ಪಕ್ಷದ ಪ್ರಮುಖರ ಜೊತೆ ಮೀಟಿಂಗ್ ಮಾಡ್ತಾರೆ. ಅನೇಕ ಮಠಾಧಿಪತಿಗಳನ್ನೂ ಮೀಟ್ ಮಾಡೋ ಯೋಜನೆ ಕೂಡ ಇದೆ.
ಈಗಾಗ್ಲೇ ಮಿಷನ್ 150 ಅನ್ನೋ ರಾಜತಂತ್ರ ರೂಪಿಸಿರೋ ಅಮಿತ್ ಶಾ. ಈ ಬಾರಿ ಕರ್ನಾಟಕದಲ್ಲಿ ಗಾಳ ಬೀಸಿ ಗೆಲುವಿನ ಮೀನು ಹಿಡಿತಾರಾ..? ಅವರ ಈ ಪ್ರವಾಸ ರಾಜ್ಯ ಬಿಜೆಪಿಲ್ಲಿ ನವಚೈತನ್ಯ ತುಂಬುತ್ತಾ..? ಕಾದುನೋಡಬೇಕಷ್ಟೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.