
ಬೆಂಗಳೂರು: ‘ಮೇ 25ರ ಮಧ್ಯರಾತ್ರಿ 3 ಪುಟದ ಅನಾಮಧೇಯ ಪತ್ರವೊಂದು ತಮ್ಮ ಇ-ಮೇಲ್'ಗೆ ಬಂದಿದ್ದು, ಅದರಲ್ಲಿ ಐಎಎಸ್ ಅಧಿಕಾರಿ ದಿವಂಗತ ಅನುರಾಗ್ ತಿವಾರಿ ನಿರ್ವಹಿಸುತ್ತಿದ್ದ ಇ-ಸ್ಕ್ಯಾಮ್ ಹಾಗೂ ಇತರೆ ಹಗರಣಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ. ಆದರೆ, ಸದ್ಯ ಅವುಗಳನ್ನು ಬಹಿರಂಗಪಡಿಸುವುದಿಲ್ಲ' ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರದಲ್ಲಿ ತಿವಾರಿ ತನಿಖೆ ನಡೆಸುತ್ತಿದ್ದ ಹಗರಣಗಳು, ನಷ್ಟದ ಮಾಹಿತಿ, ಅದಕ್ಕೆ ಯಾರು ಕಾರಣ ಎಂಬ ಮಹತ್ವದ ದಾಖಲೆಗಳಿವೆ. ತಿವಾರಿ ಅವರು ವಿವಿಧ ಹಗರಣಗಳ ಬೆನ್ನುಬಿದ್ದಿದ್ದರು. ತನಿಖೆಯಲ್ಲಿ ಐವರು ಸರ್ಕಾರಿ ಹಾಗೂ ಒಬ್ಬ ಐಎಎಸ್ ಅಧಿಕಾರಿಯಿಂದ ರು.450 ಕೋಟಿ ನಷ್ಟ ಉಂಟಾಗಲು ಕಾರಣವಾಗಿತ್ತು ಎಂಬ ಮಾಹಿತಿ ಇದೆ. ಈ ಸಂಬಂಧ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ರಾಜ್ಯಕ್ಕೆ ಸಿಬಿಐ ತನಿಖಾಧಿಕಾರಿಗಳು ಬಂದಲ್ಲಿ ಸಂಗ್ರಹಿತ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆ ಪತ್ರ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಕಷ್ಟುಪುಷ್ಟಿನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ತಿವಾರಿ ಅವರ ಕೊಲೆ ಪ್ರಕರಣ ದಿಕ್ಕು ತಪ್ಪುತ್ತಿದ್ದು ಇದಕ್ಕೆ ಬೆಂಗಳೂರು ಹಾಗೂ ಉತ್ತರ ಪ್ರದೇಶ ಪೊಲೀಸರು ಕಾರಣರಾಗಿದ್ದಾರೆ. ತಿವಾರಿ ಅವರ ಬಳಿ ಇದ್ದ ಎರಡು ಮೊಬೈಲ್ಗಳಲ್ಲಿ ಮಾಹಿತಿಗಳಿಂದ ತನಿಖೆಗೆ ಸಾಕಷ್ಟು ಸಾಕ್ಷಿ ಹಾಗೂ ಪುರಾವೆ ಸಿಗುವ ಸಾಧ್ಯತೆ ಇತ್ತು. ಆದರೆ, ಪೊಲೀಸರು ಒಂದು ಮೊಬೈಲ್'ನ ಡಾಟಾವನ್ನು ನಾಶಪಡಿಸಿದ್ದಾರೆ. ಮತ್ತೊಂದು ಮೊಬೈಲ್ನ್ನು ಲಾಕ್ ಮಾಡಿ ಅವರ ಕುಟುಂಬದ ಸದಸ್ಯರಿಗೆ ನೀಡಲಾಗಿದೆ. ಈ ಬಗ್ಗೆ ಅವರ ಕುಟುಂಬ ಸದಸ್ಯರಿಂದಲೇ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಜೀವ ಬೆದರಿಕೆ ವಿಚಾರವಾಗಿ ಬೀದರ್ನಲ್ಲಿರುವ ತಿವಾರಿ ಅವರ ಕಾರು ಚಾಲಕನ ವಿಚಾರಣೆ ನಡೆಸಲಾಗಿದ್ದು, ಆತನಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅದೇ ಜಿಲ್ಲೆಯ ಮಹಿಳಾ ಅಧಿಕಾರಿಯೊಬ್ಬರು ತಿವಾರಿಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರೂ ಅವರನ್ನು ಈವರೆಗೆ ಯಾರೂ ಸಂಪರ್ಕಿಸದೇ ಇರುವುದು ಸಂಶಯಕ್ಕೆ ಕಾರಣವಾಗಿವೆ.
ಆಹಾರ ಇಲಾಖೆಯಲ್ಲಿ ಒಂದು ವರ್ಷದಲ್ಲಿ ನಾಲ್ಕು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಉದ್ದೇಶವೇನು? ಈ ರೀತಿ ವರ್ಗಾವಣೆಗೆ ಒಳಗಾದ ಅಧಿಕಾರಿಗಳು ಯಾಕೆ ದನಿ ಎತ್ತಲಿಲ್ಲ? ಎಂಬ ಬಗ್ಗೆಯೂ ಕುತೂಹಲವಿದೆ ಎಂದರು.
ಉತ್ತರ ಪ್ರದೇಶದ 3 ಪೊಲೀಸರು ಅಮಾನತು:
ಲಖನೌ: ಇಲ್ಲಿ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಮೂವರು ಪೊಲೀಸರನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ.
ತಿವಾರಿ ಸಾವು ಸಂಭವಿಸಿದ ಮೇ 17ರ ನಸುಕಿನ 5.33ಕ್ಕೇ ಅನಾಮಿಕನಿಂದ, ಶವ ಬಿದ್ದಿರುವ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ (ದೂರವಾಣಿ ಸಂಖ್ಯೆ 100) ಫೋನ್ ಬಂದಿತ್ತು. ಆದರೆ ಈ ಮೂವರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸುವ ಬದಲು ಸುಮ್ಮನಿದ್ದರು ಎನ್ನಲಾಗಿದೆ. ಹೀಗಾಗಿ ಇವರನ್ನು ಅಮಾನತು ಮಾಡಲಾ ಗಿದೆ. ಆದರೆ ತಿವಾರಿ ಸಾವಿನ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಪೊಲೀಸರು, ಬೆಳಗ್ಗೆ 6.10ಕ್ಕೆ ತಮಗೆ ಮೊದಲ ಮಾಹಿತಿ ಲಭ್ಯವಾಗಿತ್ತು ಎಂದು ಹೇಳಿದ್ದರು. ಆದರೆ ಈಗ 5.33ಕ್ಕೇ ಮಾಹಿತಿ ಲಭ್ಯವಾಗಿದ್ದರೂ ಪೊಲೀಸರು ಸುಮ್ಮನಿದ್ದರೇಕೆಂಬುದು ಸಂದೇಹಕ್ಕೆ ಕಾರಣವಾಗಿದೆ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.