
ಉಡುಪಿ, [ಅ.01]: ಬಳ್ಳಾರಿ ಜಿಲ್ಲೆಯ ವಿಭಜನೆಯ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಷ್ಟೇ ಅಲ್ಲದೇ ವಿಭಜನೆ ಖಂಡಿಸಿ ಇಂದು [ಮಂಗಳವಾರ] ಬಳ್ಳಾರಿ ಜಿಲ್ಲೆಗೆ ಬಂದ್ ಕರೆ ಕೊಡಲಾಗಿತ್ತು. ಇದರ ಮಧ್ಯೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ವಿಜಯನಗರ ಹೊಸ ಜಿಲ್ಲೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಇಂದು [ಮಂಗಳವಾರ] ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಟಿ ರವಿ, ಹೊಸ ಜಿಲ್ಲೆ ರಚನೆ ಮಾಡುವುದು ಹೆರಿಗೆ ನೋವು ಇದ್ದಂತೆ. ಹೆರಿಗೆಯಲ್ಲಿ ತಾಯಿ-ಮಗು ಇಬ್ಬರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬಳ್ಳಾರಿ ಇಬ್ಭಾಗ ಆದ್ರೆ ರಾಜಿನಾಮೆ ಕೊಡ್ತೀವಿ: ಸೋಮಶೇಖರ್ ರೆಡ್ಡಿ
ಜಿಲ್ಲೆ ನಾಯಕರ ಸಮಾಲೋಚನೆ , ಸಹಮತ ತೆಗೆದುಕೊಂಡು ರಚನೆ ಮಾಡಲಾಗುವುದು. ಈಗಾಗಲೇ ಕಂಪ್ಲಿ ಹಾಗೂ ವಿಜಯನಗರ ಶಾಸಕರು ಸೇರಿದಂತೆ ಹಲವರು ಸೇರಿ ಮನವಿ ಸಲ್ಲಿಸಿದ್ದರು. ಎಲ್ಲಿದ್ದರೂ ಕರ್ನಾಟಕದೊಳಗೆ ಇರುತ್ತದೆ ಎಂದು ಹೇಳುವ ಮೂಲಕ ವಿಜಯನಗರ ಹೊಸ ಜಿಲ್ಲೆಯನ್ನು ಸಮರ್ಥಿಸಿಕೊಂಡರು.
ಬಳ್ಳಾರಿ ವಿಭಜನೆ ವಿರೋಧಿಸಿ ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ಚಾಗ್ತಿದೆ. ಅನರ್ಹ ಶಾಸಕ ಆನಂದ್ ಸಿಂಗ್ ಬೇಡಿಕೆ ಈಡೇರಿಸಲು ಮುಂದಾಗಿರೋ ಬಿಜೆಪಿ ಸರ್ಕಾರದ ವಿರುದ್ಧ ಇಂದು [ಮಂಗಳವಾರ] ಪ್ರತಿಭಟನೆ ಜೋರಾಗಿತ್ತು. ಬಳ್ಳಾರಿಯ ರಾಯಲ್ ವೃತ್ತದಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿದ ಹೋರಾಟಗಾರರು, ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಮಾಡಬಾರ್ದು ಎಂದು ಘೋಷಣೆ ಆಗ್ರಹಿಸಿದರು.
ಇನ್ನು ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಮಾಡಬೇಕೋ ಬೇಡವೋ ಎನ್ನುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರು ನಾಳೆ ಅಂದ್ರೆ ಬುಧವಾರ ಬೆಂಗಳೂರಿನಲ್ಲಿ ಸಭೆ ಕರೆದಿದ್ದು, ಬಳ್ಳಾರಿ ಜಿಲ್ಲೆಯ ಶಾಸಕ, ವಿಧಾನಪರಿಷತ್ ಸದಸ್ಯರನ್ನು ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆಯುವ ಸಭೆ ಬಹಳ ಮುಖ್ಯವಾಗಿದ್ದು, ಬಳ್ಳಾರಿ ವಿಭಜನೆ ಮಾಡಬೇಕೋ ಮಾಡಬಾರದೋ ಎನ್ನುವುದು ತಿಳಿಯಲಿದೆ.
ಅತ್ತ ಬಳ್ಳಾರಿಯ ವಿಜಯನಗರ ಜಿಲ್ಲೆಯ ಕೂಗು ಜೋರಾಗುತ್ತಿದ್ದಂತೆ ಇತ್ತ ಮಧುಗಿರಿ, ಜಮಖಂಡಿ, ಚಿಕ್ಕೋಡಿ, ಶಿಕಾರಿಪುರವನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಕೂಗು ಕೇಳಿ ಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.