ಬೆಳಗಾವಿ: ಮದ್ಯ ಕುಡಿಸಿ 46 ತೊಲೆ ಚಿನ್ನಾಭರಣ ದೋಚಿದ

By Suvarna Web DeskFirst Published Jun 12, 2017, 9:06 PM IST
Highlights

ಚಿನ್ನಾಭರಣಗಳಾದ ಮೂರು ಎಳೆ ಸರ, ಒಂದು ಚೈನ್‌, ನಾಲ್ಕು ತೊಡಬಳೆ, ಎರಡು ಹವಳದ ಬಳೆ, ಐದು ಹರಳು ಉಂಗುರ, ಎರಡು ನೆಕ್‌'ಲೇಸ್‌, ಒಂದು ಲಾಂಗ್‌ ಚೈನ್‌, ಒಂದು ಸಿಂಗಲ್‌ ಬಳೆ, ಒಂದು ಬ್ರಾಸ್'ಲೆಟ್‌, ಹತ್ತು ಜೊತೆ ಬಳೆಗಳು, ಹತ್ತು ಜೊತೆ ಕಿವಿಯ ಓಲೆಗಳು, ಒಂದು ಮಾಟಿಕಿ ಮಾಲೆಯನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಬೈಲಹೊಂಗಲ: ಪಾರ್ಟಿ ಹೆಸರಿನಲ್ಲಿ ಎಲ್ಲ ಕೆಲಸಗಾರರಿಗೆ ಹೊಟ್ಟೆತುಂಬ ಮದ್ಯ ಕುಡಿಸಿ ಹೋಟೆಲ್‌ ಲಾಕರ್'ನಲ್ಲಿದ್ದ ಸುಮಾರು ರು. 13.50 ಲಕ್ಷ ಮೌಲ್ಯದ 461 (46 ತೊಲೆ) ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಭಾನುವಾರ ಬೆಳಗಿನ ಜಾವ ಪಟ್ಟಣದ ದೀಪಾ ಹೋಟೆಲ್‌'ನಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಹಿರೇಕೊಪ್ಪ ಗ್ರಾಮದ ಸಂಜು ದುಂಡಪ್ಪ ಬೋಳತ್ತಿನ (30) ಶಂಕಿತ ಆರೋಪಿ ಎಂದು ಗುರುತಿಸಲಾಗಿದ್ದು, ಈತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಚಿನ್ನಾಭರಣಗಳಾದ ಮೂರು ಎಳೆ ಸರ, ಒಂದು ಚೈನ್‌, ನಾಲ್ಕು ತೊಡಬಳೆ, ಎರಡು ಹವಳದ ಬಳೆ, ಐದು ಹರಳು ಉಂಗುರ, ಎರಡು ನೆಕ್‌'ಲೇಸ್‌, ಒಂದು ಲಾಂಗ್‌ ಚೈನ್‌, ಒಂದು ಸಿಂಗಲ್‌ ಬಳೆ, ಒಂದು ಬ್ರಾಸ್'ಲೆಟ್‌, ಹತ್ತು ಜೊತೆ ಬಳೆಗಳು, ಹತ್ತು ಜೊತೆ ಕಿವಿಯ ಓಲೆಗಳು, ಒಂದು ಮಾಟಿಕಿ ಮಾಲೆಯನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಆದರೆ ಡ್ರಾನಲ್ಲಿದ್ದ ನಗದು ಹಣವನ್ನು ಹಾಗೇ ಬಿಟ್ಟು ಹೋಗಿದ್ದಾನೆ.

ಹೀಗೆ ನಡೆಯಿತು ಕಳ್ಳತನ: ಆರೋಪಿ ಸಂಜು 4 ವರ್ಷಗಳಿಂದ ದೀಪಾ ಹೋಟೆಲ್‌ನಲ್ಲಿಯೇ ಕೆಲಸ ಮಾಡುತ್ತಿದ್ದ. ಆದರೆ 15ದಿನಗಳಿಂದ ಕೆಲಸ ಬಿಟ್ಟು ಹೋಗಿದ್ದ. ಶನಿವಾರ ಮತ್ತೆ ಬಂದು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಮಾಲೀಕರಲ್ಲಿ ಕೇಳಿಕೊಂಡಿದ್ದ. ಹೀಗಾಗಿ ನಾಳೆಯಿಂದ ಕೆಲಸಕ್ಕೆ ಹಾಜರಾಗಲು ಸಂಜುಗೆ ತಿಳಿಸಿ, ಹೋಟೆಲ್‌ನಲ್ಲಿಯೇ ತಂಗಲು ಅವಕಾಶ ಮಾಡಿಕೊಡಲಾಗಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಹೋಟೆಲ್‌ನ ಮಾಲೀಕರು ರಾತ್ರಿ ಮನೆಗೆ ಹೋದ ಮೇಲೆ ಎಲ್ಲ ಕೆಲಸಗಾರರಿಗೆ ಪಾರ್ಟಿ ಹೆಸರಿನಲ್ಲಿ ರಾತ್ರಿ ಚೆನ್ನಾಗಿ ಮದ್ಯ ಕುಡಿಸಿದ್ದಾನೆ. 

ಇದರಿಂದ ಮದ್ಯದ ಅಮಲಿನಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದ್ದಾರೆ. ಆಗ ತನ್ನ ಕೈಚಳಕ ಆರಂಭಿಸಿದ ಆರೋಪಿ ನಕಲಿ ಕೀ ಬಳಸಿ ಲಾಕರ್‌ ತೆರೆದಿದ್ದಾನೆ. ಅದರಲ್ಲಿದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಿಸಿ ಕ್ಯಾಮೆರಾದ ದಿಕ್ಕು ಬದಲಿ ಸಿದ್ದಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಆರೋಪಿ ಸಂಜು ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಸೋಲುಂಡು ಸಾಕಷ್ಟುಸಾಲ ಮಾಡಿಕೊಂಡಿದ್ದ ಎಂದು ಹೋಟೆಲ್‌ ಕೆಲಸಗಾರರು ತಿಳಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಗಣಪತಿ ಗುಡಾಜ, ಸಿಪಿಐ ಸಂಗನಗೌಡ, ಪಿಎಸೈ ಮಂಜುನಾಥ ಹಿರೇಮಠ, ಅಪರಾಧ ವಿಭಾಗದ ಪಿಎಸೈ ಮಲ್ಲಯ್ಯ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆರೋಪಿ ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in

(ಫೋಟೋ ಕೇವಲ ಪ್ರಾತಿನಿಧಿಕ ಮಾತ್ರ)

click me!