
ಬೆಂಗಳೂರು(ಜೂನ್ 12): ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮರುಜನ್ಮ ಪಡೆದಿದೆ. ಇಲ್ಲಿಯ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮರುಲೋಕಾರ್ಪಣೆ ಮಾಡಿದ್ರು. ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸತ್ಯದ ಶಕ್ತಿಯನ್ನ ಹೊಸಕಿ ಹಾಕಲು ಅಧಿಕಾರದ ಶಕ್ತಿ ಪ್ರಯತ್ನಿಸುತ್ತಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
ಅಲ್ಲದೇ, ಭಾರತ ಇಂದು ಕವಲು ದಾರಿಯಲ್ಲಿದೆ. ಸತ್ಯದ ಶಕ್ತಿ ಹಾಗೂ ಅಧಿಕಾರದ ನಡುವೆ ಸತ್ಯವೇ ಗೆಲ್ಲಬೇಕು. ಸತ್ಯವನ್ನ ಹೇಳಲು ಹೆದರದಿರಿ. ಭಾರತದಲ್ಲಿ ಸಹಸ್ರಾರು ಪತ್ರಕರ್ತರಿಗೆ ತಾವೇನು ಬರೆಯಬೇಕೋ ಅದನ್ನ ಬರೆಯಲು ಅವಕಾಶ ಕೊಡ್ತಿಲ್ಲ. ಮಾದ್ಯಮಗಳ ಮೇಲೆ ಹಾಗೂ ವಿಪಕ್ಷಗಳ ಮೇಲೆ ದಾಳಿ ನಡೆಯುತ್ತಿದೆ. ಇತ್ತೀಚಿಗೆ ನಾನು ಮಧ್ಯಪ್ರದೇಶಕ್ಕೆ ಹೋದಾಗ ನನ್ನನ್ನು ತಡೆದರು. ಇದು ಇವತ್ತಿನ ಇಂಡಿಯಾ, ಇದೇ ಇಂದಿನ ಇಂಡಿಯಾದ ವಾಸ್ತವ ಅಂತ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ರಾಜ್ಯ ಕರ್ನಾಟಕ. ಈಗ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮರುಜನ್ಮವೂ ಇಲ್ಲೇ ಆಗಿರೋದು ಕಾಕತಾಳೀಯವೇನೂ ಅಲ್ಲ ಅಂದ್ರು.
ಒಟ್ಟಾರೆ, ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನ ಬೆಂಗಳೂರಿನಲ್ಲೇ ರೀಲಾಂಚ್ ಮಾಡುವ ಮೂಲಕ ರಾಹುಲ್ ಗಾಂಧಿ ಪಕ್ಷವನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ಲಾಂಚ್ ಮಾಡುವ ಮಾರ್ಗಕ್ಕೆ ಕರ್ನಾಟಕವೇ ಕೇಂದ್ರ ಸ್ಥಾನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ.
- ವೀರೇಂದ್ರ ಉಪ್ಪುಂದ್ರ, ಪೊಲಿಟಿಕಲ್ ಬ್ಯೂರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.