ನಾಪತ್ತೆಯಾದ ಮಲ್ಪೆ ಮೀನುಗಾರರ ದೋಣಿ ಪ್ರಕರಣದ ರಹಸ್ಯ ರಹಸ್ಯವಾಗಿಯೇ ಉಳಿದಿದೆ.
ಉಡುಪಿ: ನಾಲ್ಕೂವರೆ ತಿಂಗಳಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ನ ಸುತ್ತ ಸುತ್ತಿಕೊಂಡಿದ್ದ ಊಹಾಪೋಹಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬೋಟ್ನ ಅವಶೇಷ ಮಹಾರಾಷ್ಟ್ರದ ಮಾಳ್ವಾನ್ ಸಮೀಪ ಕಡಲಲ್ಲಿ ಪತ್ತೆಯಾಗಿದೆ ಎಂದು ನೌಕಾ ಪಡೆಯೇ ಘೋಷಿಸಿದೆ.
ಆದರೆ, ಈ ಬೋಟ್ ಮುಳುಗಿದ್ದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. ಡಿ. 15ರಂದು ಮಲ್ಪೆ ಬಂದರಿನಿಂದ ತೆರಳಿದ್ದ ಮೀನುಗಾರಿಕಾ ಬೋಟು ನಿಗೂಢವಾಗಿ ಕಣ್ಮರೆಯಾಗಿತ್ತು. ಈ ಬೋಟಿನ ಹುಡುಕಾಟ ನಡೆಸುತ್ತಿದ್ದ ನೌಕಾಪಡೆ ಮಹಾರಾಷ್ಟ್ರದ ಮಾಳ್ವಾನ್
ಜಿಲ್ಲೆಯ ಸಮುದ್ರ ತೀರದಲ್ಲಿ ಮುಳುಗಿದೆ ಎಂಬುದನ್ನು ಗುರುವಾರ ರಾತ್ರಿ ಅಧಿಕೃತವಾಗಿ ಘೋಷಿಸಿತ್ತು.
ಆದರೆ ಅದರಲ್ಲಿದ್ದ 7 ಮೀನುಗಾರರು ಏನಾದರು ಎಂಬುದನ್ನು ನೌಕಾಪಡೆ ಖಚಿತವಾಗಿ ಹೇಳಿರಲಿಲ್ಲ. ನೌಕಾಪಡೆ ಯೊಂದಿಗೆ ಹುಡುಕಾಟ ನಡೆಸಿದ ಮೀನುಗಾರರ ಮತ್ತು ತಜ್ಞರ ತಂಡ ಸಮುದ್ರ ದಾಳದಲ್ಲಿ ಪತ್ತೆಯಾದ ಬೋಟಿನ ಭಗ್ನಾವಶೇಷಗಳನ್ನು ನೋಡಿದಾಗ ಅದರಲ್ಲಿದ್ದ ಮೀನುಗಾರರು ಬದುಕುಳಿದಿರುವ ಸಾಧ್ಯತೆಗಳೇ ಇಲ್ಲ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದೆ.