ಬೆಳಗಾವಿ ಗಡಿ ವಿವಾದ: ಮೋದಿ ಮಧ್ಯಪ್ರವೇಶಕ್ಕೆ ಮಹಾರಾಷ್ಟ್ರ ಪಟ್ಟು

By Kannadaprabha NewsFirst Published Aug 12, 2021, 7:28 AM IST
Highlights

* ಕರ್ನಾಟಕದಲ್ಲಿನ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸಿ
* ಮರಾಠಿ ಭಾಷಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಿರಿ
* 6 ದಶಕಗಳ ಹಳೆಯ ಗಡಿ ವಿವಾದ ಇತ್ಯರ್ಥಕ್ಕೆ ಮಧ್ಯಪ್ರವೇಶ ಮಾಡಿ
 

ಮುಂಬೈ(ಆ.12): ಕರ್ನಾಟಕದೊಂದಿಗೆ ದಶಕಗಳ ಹಳೆಯ ಗಡಿ ವಿವಾದ ಇತ್ಯರ್ಥಕ್ಕೆ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮನವಿ ಮಾಡಿದ್ದಾರೆ.

ಈ ಕುರಿತು ಆ.9ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಪವಾರ್‌ ‘ಮುಂಬೈಯನ್ನು ರಾಜಧಾನಿಯಾಗಿಸಿ ಮಹಾರಾಷ್ಟ್ರ ರಾಜ್ಯ ರಚನೆಯಾಗಿ 60ಕ್ಕಿಂತ ಹೆಚ್ಚಿನ ವರ್ಷಗಳೇ ಕಳೆದರೂ ಕರ್ನಾಟಕದಲ್ಲಿನ ಮರಾಠಿ ಭಾಷಿಕ ಪ್ರದೇಶಗಳಾದ ಬೆಳಗಾವಿ, ಕಾರವಾರ, ಬೀದರ್‌, ಭಾಲ್ಕಿ, ನಿಪ್ಪಾಣಿ ಮತ್ತು ಇತರೆ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಿಲ್ಲ. ಇಷ್ಟು ವರ್ಷಗಳಾದರೂ ಸಮಸ್ಯೆ ಇನ್ನೂ ಬಗೆ ಹರಿಯದೇ ಇರುವುದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಮರಾಠಿ ಭಾಷಿಕ ಪ್ರದೇಶಗಳ ಜನರಿಗೆ ವಿಷಾದವಿದೆ. ಈ ಎಲ್ಲಾ ಭಾಗಗಳನ್ನು ಒಳಗೊಂಡ ಸಂಯುಕ್ತ ಮಹಾರಾಷ್ಟ್ರ ರಚನೆಯ ಕನಸು ನನಸಾಗುವವರೆಗೂ ಮಹಾರಾಷ್ಟ್ರ ವಿರಮಿಸುವುದಿಲ್ಲ. ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರೆಯುವುದಾದರೂ, ಈ ವಿಷಯ ಸಂಬಂಧ ನೀವು ಮಹಾರಾಷ್ಟ್ರದ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ನ್ಯಾಯಸಿಗುವಂತೆ ನೋಡಿಕೊಳ್ಳಬೇಕು ಎಂದು ಕೋರುತ್ತೇವೆ’ ಎಂದಿದ್ದಾರೆ.

ಬೆಳಗಾವಿ, ಕಾರವಾರ ನಮ್ದು: ಬೆಂಕಿಗೆ ಮಹಾ ಡಿಸಿಎಂ ತುಪ್ಪ!

‘ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ಇದೆ. ಆದರೂ ನಾವು ಈ ಹಂತದಲ್ಲಿ ನಿಮ್ಮ ಕರ್ನಾಟಕದಲ್ಲಿನ ಮರಾಠಿ ಭಾಷಿಕರಿಗೆ ನ್ಯಾಯ ದೊರಕಿಸಲು ನಿಮ್ಮ ನೆರವನ್ನು ಕೋರುತ್ತೇವೆ. ನೀವು ಈ ವಿಷಯದಲ್ಲಿ ನಮ್ಮ ಆಶಯ ನೆರವೇರಿಸುತ್ತೀರಿ ಎಂಬ ನಂಬಿಕೆಯೂ ಇದೆ’ ಎಂದು ಹೇಳಿದ್ದಾರೆ. ಜೊತೆಗೆ ‘ಮಹಾರಾಷ್ಟ್ರಕ್ಕೆ ಸೇರಿದ ವಿವಾದಿತ ಪ್ರದೇಶ ಮತ್ತು ಇತರೆ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಮರಾಠಿ ಭಾಷಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕು’ ಎಂದೂ ಪವಾರ್‌ ಮನವಿ ಮಾಡಿಕೊಂಡಿದ್ದಾರೆ.
 

click me!