
ಬೆಂಗಳೂರು (ಜ.30): 2018 ರ ಅಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ವಿಧಾನಸಭಾ ಚುನಾವಣೆಗಳ ಜೊತೆಗೆ ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆಯನ್ನೂ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಯೋಚನೆ ನಡೆಸಿದ್ದಾರೆ.
ಈ ಮೂರೂ ರಾಜ್ಯಗಳಲ್ಲಿ ಸದ್ಯ ಬಿಜೆಪಿ ಸರ್ಕಾರಗಳಿವೆ. ಆಡಳಿತ ವಿರೋಧಿ ಅಲೆಯಿಂದಾಗಿ ಈ ರಾಜ್ಯಗಳಲ್ಲೇನಾದರೂ ಬಿಜೆಪಿಗೆ ಸೋಲುಂಟಾದರೆ ಆನಂತರದ 4 ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆ ಮೇಲೆ ಅಡ್ಡ ಪರಿಣಾಮ ಬೀಳಬಹುದು ಎಂಬ ಯೋಚನೆ ಅವರದು. ಏಪ್ರಿಲ್ನಲ್ಲಿ ನಡೆಯುವ ರಾಜ್ಯ ಸಭಾ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಕೂಡ ಬಿಜೆಪಿಗೆ ಬಹುಮತ ದೊರೆಯಲಿದ್ದು, ಆಗ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ತರಲು ಮೋದಿ ಯೋಚಿಸುತ್ತಿದ್ದಾರೆನ್ನಲಾಗಿದೆ. ಅದು ಸಾಧ್ಯವಾಗದೆ ಹೋದರೆ ವರ್ಷದ ಅಂತ್ಯಕ್ಕೆ ಚುನಾವಣೆ ನಿಶ್ಚಿತ ಎನ್ನುತ್ತಿವೆ ಅಶೋಕಾ ರೋಡ್ನಲ್ಲಿರುವ ಬಿಜೆಪಿ ಕಚೇರಿ ಮೂಲಗಳು. ಆದರೆ ಸುಪ್ರೀಂಕೋರ್ಟ್ ಅಂಗಳದಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಸೆಪ್ಟೆಂಬರ್ನಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಿವೃತ್ತಿಯಾಗಲಿದ್ದು, ಅದಕ್ಕಿಂತ ಮುಂಚೆಯೇ ಅಯೋಧ್ಯೆಯ ಶ್ರೀರಾಮ ಮಂದಿರದ ವಿಷಯವನ್ನು ಇತ್ಯರ್ಥಗೊಳಿಸಲಿದ್ದಾರೆ. ಹೀಗಾದಲ್ಲಿ ಮುಂದಿನ ಲೋಕಸಭೆ ಚುನಾವಣೆ ಅದೇ ವಿಷಯದ ಮೇಲೆ ನಡೆಯಬಹುದು. ಅದೇನೇ ಇರಲಿ ಮುಂದಿನ ಚುನಾವಣೆ ಬಗ್ಗೆ ಮೋದಿ ಮತ್ತು ಅಮಿತ್ ಶಾ ಈಗಿನಿಂದಲೇ ತಲೆ ಕೆಡಿಸಿಕೊಂಡಂತೆ ಮಾತ್ರ ಕಾಣುತ್ತಿದೆ.
- ಪ್ರಶಾಂತ್ ನಾತು, ಇಂಡಿಯಾ ಗೇಟ್ ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.