ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಇದೇನು ಚುನಾವಣೆ ಮುಗಿದ ಮೇಲೆ ಬಿಜೆಪಿಯಲ್ಲಿ ಏನಾಯಿತು? ಅಂದುಕೊಂಡ್ರಾ.. ಈ ಸುದ್ದಿ ಓದಿ ಎಲ್ಲವೂ ಗೊತ್ತಾಗುತ್ತದೆ.
ಬೆಂಗಳೂರು[ಜು.10] ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನಡಾವಳಿಗಳನ್ನು ವಿರೋಧಿಸಿ ವಿಧಾನಪರಿಷತ್ ಸದಸ್ಯರು ಸಭಾತ್ಯಾಗ ಮಾಡಿದ್ದಕ್ಕೆ ಸ್ವತಃ ಮೇಲ್ಮನೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ಕೆಲ ವಿಚಾರ ಪ್ರಸ್ತಾಪ ಮಾಡುವುದು ಬಾಕಿ ಇತ್ತು. ಯಾರನ್ನು ಕೇಳಿ ನೀವು ಸಭಾತ್ಯಾಗ ಮಾಡಿದಿರಿ ಎಂದು ಬಿಜೆಪಿ ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ. ಹೀಗೆ ನಿಮ್ಮ ಇಷ್ಟಕ್ಕೆ ಬಂದಂತೆ ನಡೆದುಕೊಳ್ಳೋದಾದ್ರೆ ನಾನ್ಯಾಕೆ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಾಣಪ್ಪ ಅವರು ಹೊರಗೆ ಬಂದಿದ್ದರಿಂದ ನಾವೂ ಹೊರಕ್ಕೆ ಬಂದೆವು ಎಂದು ಕೆಲ ಬಿಜೆಪಿ ಶಾಸಕರು ಉತ್ತರವನ್ನು ಕೊಟ್ಟರು.
ಆದರೆ ಇದಕ್ಕೆ ತೃಪ್ತಿಯಾಗದ ಪೂಜಾರಿ, ನಾನು ಇನ್ನೊಂದಿಷ್ಟು ಸ್ಪಷ್ಟೀಕರಣ ಕೊಡುವುದಿತ್ತು. ಹೀಗೆ ನಡೆದುಕೊಂಡಿದ್ದು ಸರಿಯಲ್ಲ. ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.