
ಬೆಂಗಳೂರು(ಆ.09): ಮಕ್ಕಳ ಸಾಹಿತ್ಯದಿಂದ ಮಹಾಕಾವ್ಯದವರೆಗೂ ಎಲ್ಲಾ ಪ್ರಕಾರದ ಸಾಹಿತ್ಯ ರಚಿಸುವ ಮೂಲಕ ರಾಷ್ಟ್ರಕವಿ ಕುವೆಂಪು ಅವರು ರಸಋಷಿಯಾಗಿ ಹೆಸರು ಪಡೆದಿದ್ದಾರೆ ಎಂದು ಕವಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಲಾಲ್ಬಾಗ್ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಬುಧವಾರ ಗಿರಿನಗರದ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ತಂತಿ ಮತ್ತು ದಾರದಲ್ಲಿ ರಚಿಸಿದ ಕುವೆಂಪು ಅವರ ಚಿತ್ರ ಅನಾವರಣಗೊಳಿಸಿ ಮಾತನಾಡಿದರು. ಸಾಹಿತ್ಯ ಲೋಕದ ಬಹುದೊಡ್ಡ ಪ್ರಶಸ್ತಿ ಜ್ಞಾನಪೀಠ ಪಡೆದ ಕುವೆಂಪು ಸರಳ ವ್ಯಕ್ತಿತ್ವ ಹೊಂದಿದ್ದರು. ಎಲ್ಲರನ್ನು ಅಕ್ಕರೆ ಅಭಿಮಾನದಿಂದ ಕಾಣುತ್ತಿದ್ದರು. ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರ ಆದರ್ಶಗಳು ಅವರ ರಚನೆಯಲ್ಲೂ ಕಾಣುತ್ತವೆ. ಅವರ ಸಾಹಿತ್ಯ ಸರ್ವಕಾಲಕ್ಕೂ ಶ್ರೇಷ್ಟವಾದುದು. ಕವಿತೆಗಳನ್ನು ರಚಿಸಲು ತನಗೆ ಅವರು ಸ್ಫೂರ್ತಿದಾಯಕರಾಗಿದ್ದರು ಎಂದು ತಿಳಿಸಿದರು.
ಶಾಂತಿ ನಿಕೇತನ ಶಾಲೆಯ ಪ್ರಾಂಶುಪಾಲೆ ಶ್ವೇತಾ ಸುಮಂತ್ ಮಾತನಾಡಿ, ನಾಡಿಗೆ ತಮ್ಮ ಬರಹಗಳ ಮೂಲಕ ಬಹುದೊಡ್ಡ ಕೊಡುಗೆ ನೀಡಿರುವ ಕುವೆಂಪು ಅವರಿಗೆ ಈ ಚಿತ್ರದ ಮೂಲಕ ನಮನ ಸಲ್ಲಿಸುತ್ತಿದ್ದೇವೆ. ಈ ಚಿತ್ರವನ್ನು ರಚಿಸುವಾಗ ಮಕ್ಕಳಿಗೆ ಕುವೆಂಪು ಅವರ ಬಗ್ಗೆ ಪರಿಚಯ ಮಾಡಿಕೊಳ್ಳಲಾಯಿತು. ಕುವೆಂಪು ಅವರ ಸಾಹಿತ್ಯದ ಬಗ್ಗೆ ತಿಳಿಸಲಾಯಿತು ಎಂದು ಹೇಳಿದರು.
ಶಾಂತಿ ನಿಕೇತನ ಶಾಲೆಯ 6 ರಿಂದ 10ನೇ ತರಗತಿಯ ಮಕ್ಕಳು ದಾರ ಮತ್ತು ತಂತಿಯ ಮೂಲಕ ಕುವೆಂಪು ಅವರ ಚಿತ್ರವನ್ನು ರಚಿಸಿದ್ದರು.
ಲಾಲ್ಬಾಗ್ನಲ್ಲಿ ಶಾಲಾ ಮಕ್ಕಳ ಕಲರವ:
ಸೋಮವಾರದಿಂದ ಶುಕ್ರವಾರದರೆಗೆ ಶಾಲಾ ಮಕ್ಕಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹೀಗಾಗಿ ಸಸ್ಯಕಾಶಿಯಲ್ಲಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬುಧವಾರ ಆಗಮಿಸುತ್ತಿದ್ದರು. ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಕವಿ ಮನೆ, ಕವಿಶೈಲ, ೩ಡಿ ಜೋಗ ಜಲಪಾತವನ್ನು ವೀಕ್ಷಿಸಿದ ಮಕ್ಕಳು, ಹೂವಿನಲ್ಲಿ ಮೂಡಿದ ನವಿಲು, ಅಲ್ಲಲ್ಲಿ ಕಂಡ ಕುವೆಂಪು ಅವರ ಪದ್ಯದ ಸಾಲುಗಳನ್ನು ಓದಿ ನೋಡಿ ಖುಷಿಪಟ್ಟರು.
12 ಸಾವಿರ ಜನ ಭೇಟಿ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ಬಾಗ್ನಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದ 6ನೇ ದಿನವಾದ ಬುಧವಾರ ಸುಮಾರು 12ಸಾವಿರ ಜನ ಭೇಟಿ ನೀಡಿದ್ದು, ಒಟ್ಟು 5 ಲಕ್ಷ ರೂ ಸಂಗ್ರಹವಾಗಿದೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.