ಬೆಂಗಳೂರು(ಸೆ.26): ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್ ಮತ್ತೆ ಸಚಿವರಾಗುತ್ತಿದ್ದಾರೆ. ಇಂದು ಬೆಳಗ್ಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಕೆ.ಜೆ. ಜಾರ್ಜ್, ರಾಜೀನಾಮೆ ನೀಡಿದ ಮೂರು ತಿಂಗಳೊಳಗೆ ಮತ್ತೆ ಸಚಿವರಾಗುತ್ತಿದ್ದಾರೆ. ಈಕುರಿತಾದ ಒಂದು ವರದಿ
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂರು ತಿಂಗಳು ಕಳೆಯುವ ಮುನ್ನವೇ ಕೆ.ಜೆ. ಜಾರ್ಜ್ ಮತ್ತೆ ಸಚಿವರಾಗುತ್ತಿದ್ದಾರೆ. ಜುಲೈ 7ರಂದು ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆ.ಜೆ. ಜಾರ್ಜ್ ಹೆಸರು ಹೇಳಿದ್ದರು. ಈ ಹಿನ್ನಲೆಯಲ್ಲಿ ವಿಪಕ್ಷಗಳ ತೀವ್ರ ಹೋರಾಟದ ನಂತರ ಜುಲೈ 18ರಂದು ಕೆ.ಜೆ. ಜಾರ್ಜ್ ಸಚಿವ ಸ್ಥಾನ ತೆರವುಗೊಳಿಸಿ, ಸಿದ್ದರಾಮಯ್ಯ ಕೈಗೆ ರಾಜೀನಾಮೆ ಪತ್ರವಿಟ್ಟಿದ್ದರು. ಇದಾಗಿ 3 ತಿಂಗಳೂ ಕಳೆದಿಲ್ಲ. ಜಾರ್ಜ್ ಮತ್ತೆ ಮಿನಿಸ್ಟರ್ ಆಗುತ್ತಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಜಾರ್ಜ್
ಬೆಳಗ್ಗೆ 10:15ಕ್ಕೆ ಸರಿಯಾಗಿ ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ, ಜಾರ್ಜ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 3 ತಿಂಗಳ ಹಿಂದೆ ಸಿಎಂ ಬಳಿ ಜಾರ್ಜ್ ಬಿಟ್ಟು ಹೋದ ಬೆಂಗಳೂರು ಅಭಿವೃದ್ಧಿ ಖಾತೆ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವೇ ಜಾರ್ಜ್ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಜಾರ್ಜ್ ಇಷ್ಟು ತರಾತುರಿಯಲ್ಲಿ ಮತ್ತೆ ಸಚಿವರಾಗುತ್ತಿರುವ ಬಗ್ಗೆ ಬಿಜೆಪಿ ತಗಾದೆಯಿದೆ.
ಈಗಾಗಲೇ ಸಿಐಡಿ ತನಿಖೆ ನಡೆಸಿ ಮೂರೇ ತಿಂಗಳೊಳಗೆ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿ ಬಿ-ರಿಪೋರ್ಟ್ ಕೋರ್ಟ್ಗೆ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯನವರ ಸಂಪುಟದಲ್ಲಿ ಮುವತ್ತಮೂರು ಸಚಿವರನ್ನಿಟ್ಟುಕೊಂಡು ಒಂದು ಸ್ಥಾನ ಖಾಲಿ ಉಳಿಸಿಕೊಂಡಿದ್ದರು. ಆ ಒಂದು ಸ್ಥಾನ ಜಾರ್ಜ್ ಅವರಿಗೋಸ್ಕರ ಮೀಸಲಾಗಿತ್ತು ಎನ್ನುವ ರಾಜಕೀಯ ವಲಯದ ಮಾತು ದಿಟವಾಗುತ್ತಿದೆ. ಒಟ್ಟಾರೆ ಜಾರ್ಜ್ ಸಚಿವ ಸಂಪುಟ ಸೇರುವುದರೊಂದಿಗೆ ಸಿದ್ದರಾಮಯ್ಯ ಸಚಿವ ಸಂಪುಟ ಮೊದಲ ಬಾರಿ ಪೂರ್ಣವಾಗಲಿದೆ.