
ಕೊಚ್ಚಿ(ಸೆ.24): ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಹಿಂದೂ ಯುವತಿಯೊಬ್ಬಳು ಮತ್ತೆ ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿದ್ದಾರೆ. ಕಳೆದ ಜುಲೈನಲ್ಲಷ್ಟೇ ಹಿಜಾಬ್ ಧರಿಸಿ ಪತ್ರಿಕಾ ಗೋಷ್ಠಿ ನಡೆಸಿದ್ದ ಆದಿರಾ ಎಂಬ ಮಹಿಳೆ, ತಾನು ಸ್ವಯಂ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಘೋಷಿಸಿದ್ದರು. ಇದೀಗ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿರುವ ಆದಿರಾ, ಹಣೆಯಲ್ಲಿ ಕುಂಕುಮ ಮತ್ತು ಬಿಂದಿ ಇಟ್ಟು ಹಿಂದೂ ಮಹಿಳೆಯ ರೀತಿ ಕಾಣಿಸಿಕೊಂಡರು.
ಇಸ್ಲಾಂಗೆ ಮತಾಂತರವಾಗಿ ಆಯೇಷಾ ಆಗಿದ್ದ ಆದಿರಾ, ಮತ್ತೆ ಹಿಂದೂ ಧರ್ಮಕ್ಕೆ ಮರು ಮತಾಂತರವಾದ ಬಗ್ಗೆ ಘೋಷಿಸಿದರು. ಜುಲೈ ಮೊದಲ ವಾರದಲ್ಲಿ ಮನೆ ಬಿಟ್ಟಿದ್ದ ಆದಿರಾ, ತಾನು ಇಸ್ಲಾಂ ಅಧ್ಯಯನಕ್ಕೆ ತೆರಳುತ್ತಿರುವುದಾಗಿ 15 ಪುಟಗಳ ಪತ್ರ ಬರೆದಿಟ್ಟು ತೆರಳಿದ್ದರು. ಆದರೆ ಜು. 27ರಂದು ಕಣ್ಣೂರು ಪೊಲೀಸ್ ಠಾಣೆಗೆ ಹಾಜರಾದ ಆಕೆಯನ್ನು ಸ್ಥಳೀಯ ಕೋರ್ಟ್ ಸರ್ಕಾರಿ ಮಹಿಳಾ ಗೃಹದಲ್ಲಿರಿಸುವಂತೆ ಆದೇಶಿಸಿತ್ತು. ಬಳಿಕ ಅವರ ಹೆತ್ತವರು ಕೇರಳ ಹೈಕೋರ್ಟ್ಗೆ ಹೋಗಿ, ಆಕೆಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ತಮ್ಮ ಇಸ್ಲಾಂ ಆಚರಣೆಗೆ ವಿರೋಧಿಸುವುದಿಲ್ಲ ಎಂದು ಹೆತ್ತವರು ಒಪ್ಪಿದ ಬಳಿಕ, ಹೆತ್ತವರೊಂದಿಗೆ ಕಳುಹಿಸಲು ಕೋರ್ಟ್ ಅನುಮತಿ ನೀಡಿತ್ತು.
ಗೆಳತಿಯರು ಹಾದಿ ತಪ್ಪಿಸಿದರು:
‘ನನ್ನ ಮುಸ್ಲಿಂ ಸ್ನೇಹಿತರು ಇಸ್ಲಾಂ ಬಗ್ಗೆ ನನಗೆ ನಂಬಿಕೆ ಬರುವಂತೆ ತಪ್ಪು ಮಾಹಿತಿ ನೀಡಿದ್ದರು’ ಎಂದು ಆದಿರಾ ಇದೀಗ ತಿಳಿಸಿದ್ದಾರೆ. ಆದಿರಾಗೆ ಇಸ್ಲಾಂ ಕುರಿತಂತೆ ಹಲವಾರು ಪುಸ್ತಕಗಳನ್ನು ಓದಲು ನೀಡಲಾಗಿತ್ತು. ‘ನಾನು ವಿವಾದಿತ ಧರ್ಮ ಗುರು ಝಾಕಿರ್ ನಾಯ್ಕ್ ಭಾಷಣಗಳನ್ನೂ ನೋಡಿದ್ದೆ. ಮತಾಂತರಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ನೀಡಲಾಗಿತ್ತು. ಒಂದು ಪುಸ್ತಕದಲ್ಲಿ ನರಕದ ಬಗ್ಗೆ ಭಯಾನಕವಾಗಿ ವಿವರಿಸಲಾಗಿತ್ತು. ಅವು ನನಗೆ ಕೆಲವು ರಾತ್ರಿಗಳು ನಿದ್ದೆಯಿಲ್ಲದಂತೆ ಮಾಡಿದ್ದವು. ಇಸ್ಲಾಂ ಪಾಲಿಸದಿದ್ದಲ್ಲಿ, ನಾನೂ ನರಕಕ್ಕೆ ಹೋಗಬಹುದೆಂದು ಯೋಚಿಸಲಾರಂಭಿಸಿದ್ದೆ’ ಎಂದು ಆಕೆ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್'ಐ) ಕಾರ್ಯಕರ್ತ ಸಿರಾಜ್ ಎಂಬಾತ ತಮಗೆ ಎಲ್ಲ ರೀತಿಯ ಸಹಾಯ ಮಾಡಿದ್ದ. ಹೆತ್ತವರು ದೂರು ನೀಡಿದಾಗ ಕೋರ್ಟ್ಗೆ ಹೇಳಿಕೆ ನೀಡಲೂ ಆತ ಹೇಳಿಕೊಟ್ಟಿದ್ದರು. ಆದರೆ ಹಿಂದೂ ಸಹಾಯವಾಣಿ ಜನರು ತಮ್ಮ ಹೆತ್ತವರಿಗೆ ಎರ್ನಾಕುಲಂನ ಆರ್ಷ ವಿದ್ಯಾ ಸಮಾಜಂ ಬಗ್ಗೆ ತಿಳಿಸಿದರು. ಅವರು ತಮ್ಮನ್ನು ಬಲವಂತ ಪಡಿಸಲಿಲ್ಲ, ಬದಲಾಗಿ ಸರಿಯಾದ ಮಾಹಿತಿ ನೀಡಿದರು. ಕುರಾನ್ ಅನ್ನು ಮುಕ್ತ ಮನಸ್ಸಿನಿಂದ ಮತ್ತೊಮ್ಮೆ ಓದುವಂತೆ ಅವರು ಸೂಚಿಸಿದ್ದರು. ಹೀಗಾಗಿ ಅದನ್ನು ಮತ್ತೆ ಓದಿದಾಗ ಕೆಲವೊಂದು ಸಂದೇಹಗಳು ಮೂಡಿದವು. ಬಳಿಕ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೂಡಿತು. ಹೀಗಾಗಿ ಸಮಾಜಂನಲ್ಲಿ ನೋಂದಾಯಿತಳಾದೆ. ಬಳಿಕ, ತಾವು ಇಸ್ಲಾಂ ನಂಬಿದ್ದು ಸರಿಯಾಗಿರಲಿಲ್ಲ ಎಂಬುದು ಅರಿವಾಯಿತು ಎಂದು ಆದಿರಾ ಸ್ಪಷ್ಟಪಡಿಸಿದರು.
ಹಿಂದೂ ಧರ್ಮಕ್ಕೆ ಮರು ಮತಾಂತರವಾಗಲು ಯಾರೊಬ್ಬರೂ ಬಲವಂತ ಮಾಡಿಲ್ಲ ಎಂದು ಆಕೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.