ನವದೆಹಲಿ(ಅ.07): ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಬಗ್ಗೆ ಪುರಾವೆ ಕೇಳಿದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಈಗ ಪಾಕ್ ಸಾಮಾಜಿಕ ತಾಣಗಳ ಟಾಪ್ ಟ್ರೆಂಡ್ ಆಗಿದ್ದಾರೆ.
#PakStandsWithKejriwal ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಟ್ವೀಟರ್'ನಲ್ಲಿ ಸಂದೇಶಗಳು ಹರಿದಾಡುತ್ತಿವೆ. ಈ ಮೂಲಕ ದೆಹಲಿ ಸಿಎಂ ಪಾಕಿಸ್ತಾನಿಗಳ ಸಾಮಾಜಿಕ ತಾಣದಲ್ಲಿ ಸತ್ಯ ಹೇಳು ಹೀರೋ ಆಗಿ ಹೊರಹೊಮ್ಮಿದ್ದಾರೆ. ಸೀಮಿತ ದಾಳಿಯ ಬಗ್ಗೆ ಸಾಕ್ಷ್ಯಗಳನ್ನು ನೀಡಬೇಕು ಎಂದು ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮಸಿ ಎರಚಲಾಗಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ.
ಕಳೆದ ಸೋಮವಾರ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರ ಸೀಮಿತ ದಾಳಿಯ ಸಾಕ್ಷ್ಯಗಳನ್ನು ಬಹಿರಂಗಪಡಿಸುವ ಮೂಲಕ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಬೇಕು ಎಂದು ಆಗ್ರಹಿಸಿದ್ದರು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.