
ತುಮಕೂರು[ಜ.21]: ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಶಿವನ ಸನ್ನಿಧಿ ಸೇರಿದರು. ಆ ಮೂಲಕ ಕನ್ನಡ ನಾಡಿನ ಅನೇಕರಿಗೆ ಬಾಳಿನ ಬೆಳಕಾಗಿದ್ದ ನಂದಾ ದೀಪವೊಂದು ಆರಿದಂತಾಗಿದೆ. ತುಮಕೂರಿನ ಸಿದ್ಧಗಂಗಾ ಸ್ವಾಮೀಜಿ ಸಾಧನೆಗಳ ಭಂಡಾರದೊಂದಿಗೆ ನಮ್ಮೆಲ್ಲರನ್ನೂ ಬಿಟ್ಟು ಅಗಲಿದ್ದಾರೆ. 111 ವರ್ಷ ವಯಸ್ಸಾದರೂ ಚಟುವಟಿಕೆಯಿಂದಲೇ ಇದ್ದ ಸ್ವಾಮೀಜಿ ನಮ್ಮೊಂದಿಗೆ ಇಲ್ಲ ಎಂಬುದನ್ನು ಸುಲಭಕ್ಕೆ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.
"
ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳು ಕಂಡು ಬಂದಿತ್ತು. ತುಮಕೂರಿನ ಸಿದ್ದಗಂಗಾ ಮಠದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಠಕ್ಕೆ ಮರಳಿದ ನಂತರ ಆರೋಗ್ಯ ಸಾಕಷ್ಟು ಸುಧಾರಿಸಿ, ಶಿವ ಪೂಜೆಯಲ್ಲಿಯೂ ಪಾಲ್ಗೊಂಡಿದ್ದರು. ಇದು ಭಕ್ತರಲ್ಲಿ ಸಾಕಷ್ಟು ಭರವಸೆಯನ್ನು ಹುಟ್ಟು ಹಾಕಿತ್ತು. ಆದರೆ, ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಶ್ರೀಗಳು ಸೋಮವಾರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾದರು, ಎಂದು ಮಠದ ಪ್ರಕಟಣೆ ಸ್ಪಷ್ಟಪಡಿಸಿದೆ.
1 ಏಪ್ರಿಲ್ 1907ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಜನಿಸಿದ್ದ ಸ್ವಾಮೀಜಿ ಅವರಿಗೆ ಇಡೀ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ಖುದ್ದು ಪ್ರಧಾನ ಮಂತ್ರಿ, ರಾಷ್ಟ್ರಪತಿಗಳಾದಿಯಾಗಿ ಎಲ್ಲರೂ ಶ್ರೀಗಳು ಇದ್ದಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋದ ಉದಾಹರಣೆಗಳಿವೆ.
ಕರ್ನಾಟಕ ರತ್ನ ಡಾ. ಶ್ರೀ.ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಎಲ್ಲರೂ ಸಂಬೋಧಿಸುತ್ತಿದ್ದರು. ಅವರ ಸಾಧನೆ ಮತ್ತು ಕೊಡುಗೆಯನ್ನು ಅಕ್ಷರಗಳ ಮುಖೇನ ಕಟ್ಟಿಕೊಡುವುದು ಕಷ್ಟ. ಅಕ್ಷರ, ಜ್ಞಾನ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿದ ಸೂರ್ಯ ಮರೆಯಾಗಿದೆ.
ಚೆನ್ನೈನಲ್ಲಿ ಚಿಕಿತ್ಸೆ:
ಕೆಲ ದಿನಗಳ ಹಿಂದಷ್ಟೇ ಪಿತ್ತಕೋಶ ಮತ್ತು ಯಕೃತ್ತಿನ ಸೋಂಕು ಕಾಣಿಸಿಕೊಂಡಿದ್ದ ಶ್ರೀಗಳನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 13 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡ ಸ್ವಾಮೀಜಿ ಮಠಕ್ಕೆ ಹಿಂದಿರುಗಿ ತಮ್ಮ ಎಂದಿನ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ರೆಲಾ ಆಸ್ಪತ್ರೆಯಲ್ಲಿದ್ದಾಗ ಶ್ರೀಗಳ ಒತ್ತಾಯದ ಮೇರೆಗೆ ಐಸಿಯುನಲ್ಲೇ ಅವರಿಗೆ ಇಷ್ಟಲಿಂಗ ಪೂಜೆ ನೆರವೇರಿಸಲೂ ಅವಕಾಶ ಕಲ್ಪಿಸಲಾಗಿತ್ತು. ಶ್ರೀಗಳಿಗೆ ವಿಶ್ರಾಂತಿ ಅಗತ್ಯ ಇದ್ದ ಕಾರಣ ಡಿಸ್ಚಾರ್ಜ್ ಆದ ಮೇಲೆ 2 ವಾರಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯವಿರಲಿಲ್ಲ.
ಶತಾಯುಷಿಗೆ ಶತ ನಮನ: ಕ್ಷಣ ಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಇದಾದ ಕೆಲವು ದಿನಗಳಲ್ಲೇ ಶ್ರೀಗಳ ಶ್ವಾಸಕೋಶದಲ್ಲಿ ಮತ್ತೆ ನೀರು ತುಂಬಿಕೊಂಡು ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಶ್ರೀಗಳ ತಪಾಸಣೆ ನಡೆಸಿದ್ದ ವೈದ್ಯರು ಆರಂಭದಲ್ಲಿ ಶ್ವಾಸಕೋಶದಲ್ಲಿ ತುಂಬಿಕೊಳ್ಳುತ್ತಿದ್ದ ನೀರು ಹೊಟ್ಟೆಗೂ ವ್ಯಾಪಿಸಲಾರಂಭಿಸಿತ್ತು. ಚಿಕಿತ್ಸೆ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣಲಿಲ್ಲ, ಶ್ರೀಗಳಿಗೆ ಉಸಿರಾಡಲೂ ಕಷ್ಟವಾಗುತ್ತಿರುವುದರಿಂದ ವೆಂಟಿಲೇಟರ್ನಲ್ಲಿಡಲಾಗಿತ್ತು. ಆದರೆ, ಶ್ರೀಗಳ ಇಚ್ಛೆಯಂತೆ ಮಠಕ್ಕೆ ಕರೆ ತಂದು, ಆಸ್ಪತ್ರೆಯಂತೆಯೇ ಚಿಕಿತ್ಸೆ ಮುಂದುವರಿಸಲಾಗಿತ್ತು.
ಮಠಕ್ಕೆ ಕರೆ ತಂದ ಬಳಿಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿ, ಚಿಕಿತ್ಸೆಗೆ ಸ್ಪಂದಿಸಲು ಆರಂಭಿಸಿದ್ದರು. ಇದು ವೈದ್ಯ ಲೋಕದ ವಿಸ್ಮಯವೆಂದೇ ಹೇಳಲಾಗಿತ್ತು. ಇದು ಭಕ್ತ ವರ್ಗಕ್ಕೂ ನೆಮ್ಮದಿ ನೀಡಿತ್ತು. ಆದರೆ ಮತ್ತೆ ಶ್ರೀಗಳ ಆರೋಗ್ಯ ಗಂಭೀರಗೊಂಡು ಬಹು ಅಂಗಾಂಗ ವೈಫಲ್ಯದಿಂದ ಸೋಮವಾರ ಲಿಂಗೈಕ್ಯರಾದರು. ಶ್ರೀಗಳ ಅಗಲುವಿಕೆಯಿಂದ ಭಕ್ತಗಣದಲ್ಲಿ ಶೋಕ ಮಡುಗಟ್ಟಿದೆ. ಶ್ರೇಷ್ಠ ಮೌನ ಹುಣ್ಣಿಮೆಯಂದೇ ಶ್ರೀಗಳು ಶಿವನ ಪಾದ ಸೇರಿರುವುದು ಮಾತ್ರ ಕಾಕತಾಳೀಯ.
ಸೋಮವಾರ ಬೆಳಗ್ಗೆ 11.44ಕ್ಕೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ ಎಂದು ಮಠದ ಮೂಲಗಳು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ