‘ಜಮೀರ್‌ನ ಒಳಗೆ ಹಾಕಿ ಒದ್ದರೆ, ಐಎಂಎ ಸತ್ಯ ಬಯಲು’

By Web DeskFirst Published Jul 1, 2019, 10:38 AM IST
Highlights

ಜಮೀರ್‌ನ ಒಳಗೆ ಹಾಕಿ ಒದ್ದರೆ, ಐಎಂಎ ಸತ್ಯ ಬಯಲು: ಈಶ್ವರಪ್ಪ | ಪಿಕ್‌ ಪಾಕೇಟ್‌ನವರನ್ನು ಪೊಲೀಸರು ಒದ್ದು ವಸೂಲಿ ಮಾಡುವಂತೆ ಮಾಡಲಿ | ಸಿದ್ದುಯಿಂದ ದಲಿತರು, ಹಿಂದುಳಿದವರಿಗೆ ಅನ್ಯಾಯ, ಮತ್ತೆ ಅದೇ ಕಾರ್ಡ್‌ ಬಳಸಿ ಅಧಿಕಾರ ಹಿಡಿಯಲಾಗಲ್ಲ

ಚಿತ್ರದುರ್ಗ (ಜು. 01): ಪೊಲೀಸರು ಪಿಕ್‌ ಪಾಕೇಟ್‌ ಮಾಡಿದವನನ್ನು ಒದ್ದು ವಸೂಲಿ ಮಾಡುತ್ತಾರೆ. ಅದೇ ರೀತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ರನ್ನು ಅರೆಸ್ಟ್‌ ಮಾಡಲಿ. ಲಾಕಪ್‌ನಲ್ಲಿಟ್ಟು ಒದ್ದರೆ, ಐಎಂಎ ಹಗರಣದ ಲೂಟಿ ಬಯಲಾಗಲಿದೆ. ಎಸ್‌ಐಟಿ ಮೂಲಕ ತನಿಖೆ ನಡೆದರೆ, ಸತ್ಯ ಹೊರ ಬರಲ್ಲ. ಜಮೀರ್‌ ಅಹ್ಮದ್‌ರನ್ನು ಕ್ಯಾಬಿನೆಟ್‌ನಿಂದ ಕೈ ಬಿಟ್ಟು ಸಮಗ್ರ ತನಿಖೆ ನಡೆಸಲಿ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ವಾಗ್ದಾಳಿ ನಡೆಸಿ, ಹಿಂದುಳಿದವರು, ದಲಿತರನ್ನು ಬಹಳಸಲ ಮೋಸ ಮಾಡಲು ಆಗಲ್ಲ. ಎಚ್‌.ವಿಶ್ವನಾಥ್‌, ಮುಕಡಪ್ಪ, ಶ್ರೀನಿವಾಸ್‌ ಸಿದ್ದರಾಮಯ್ಯ ಅವರ ಜೊತೆಗಿದ್ದರು. ಆದರೆ, ಸಿದ್ದರಾಮಯ್ಯ ಅವರಿಗೆ ದಲಿತ, ಹಿಂದುಳಿದ ನಾಯಕರಿಗೆ ಅನ್ಯಾಯ, ಮೋಸ ಆಯಿತು. ಮತ್ತೆ ದಲಿತ, ಹಿಂದುಳಿದ ಕಾರ್ಡ್‌ ಬಳಸಿ ಅಧಿಕಾರ ಹಿಡಿಯಲು ಸಫಲರಾಗಲ್ಲ ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಅರ್ಥವಿಲ್ಲ ಎಂದು ಜೆಡಿಎಸ್‌ನವರೇ ಹೇಳುತ್ತಿದ್ದಾರೆ. ಮೈತ್ರಿ ಸರ್ಕಾರದ ಹೆಸರಿನಲ್ಲಿ ರಾಜ್ಯದ ಜನರಿಗೆ ದ್ರೋಹ ಬೇಡ. ರಾಜ್ಯದಲ್ಲಿ ಮಳೆ ಇಲ್ಲದೆ, ಭೀಕರ ಬರಗಾಲವಿದೆ. ರಾಹುಲ್‌ ಗಾಂಧಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ನಾನು ಹೇಳಲು ಬಯಸುವೆ, ರಾಜ್ಯದ ಅಭಿವೃದ್ಧಿ ಮಾಡಲಿ ಇಲ್ಲ ಮನೆಗೆ ಹೋಗಲಿ. ದೇಶದ ಜನ ಪ್ರಧಾನಿನರೇಂದ್ರ ಮೋದಿ ಅವರನ್ನು ಮೆಚ್ಚಿ ಮತ ನೀಡಿದ್ದಾರೆ. ಮೋದಿಗೆ ಓಟ್‌ ಹಾಕಿದ್ದೀರಿ, ನಮ್ಮ ಬಳಿ ಕೆಲಸ ತಗೋಳ್ತಿರಿ ಅನ್ನೋದಕ್ಕೆ ಅರ್ಥವಿಲ್ಲ ಎಂದು ಹೇಳಿದರು.

ಸಿಎಂ ಅಮೆರಿಕಾಕ್ಕೆ ಹೋಗಿದ್ದು, ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿರಲು ನನ್ನ ಆಕ್ಷೇಪವಿಲ್ಲ, ಸಿಎಂ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಲಿ. ರಾಜ್ಯದ ಜನರ ನೇತಾರ, ಅಭಿವೃದ್ಧಿ ಕಾಪಾಡುವ ತಂದೆ ಅವರು, ಅಮೆರಿಕಾಕ್ಕೆ ಹೋಗಿ ಜನರಿಗೆ ಏನು ಅನುಕೂಲ ಮಾಡಿಕೊಡಲು ಸಾಧ್ಯ, ಮಾಡಲಿ. ಸಂಕಷ್ಟದಲ್ಲಿರುವ ಜನರತ್ತ ಸಿಎಂ ಗಮನಹರಿಸಲಿ ಎಂದು ಹೇಳಿದರು.

ನಾವು ಮೈತ್ರಿ ಸರ್ಕಾರ ಬೀಳಿಸುವ ಪ್ರಶ್ನೆಯೇ ಇಲ್ಲ. ಮೈತ್ರಿ ಸರ್ಕಾರದವರು ಅವರವರೇ ಬಡಿದಾಡ್ತಿದ್ದಾರೆ. ಕಾಂಗ್ರೆಸ್‌ನವರ ಮೇಲೆ ಜೆಡಿಎಸ್‌, ಜೆಡಿಎಸ್‌ ಮೇಲೆ ಕಾಂಗ್ರೆಸ್‌ನವರು, ಕಾಂಗ್ರೆಸ್‌ನ ಒಳಗೆ ಕಾಂಗ್ರೆಸ್‌ನವರು, ಜೆಡಿಎಸ್‌ನ ಒಳಗೆ ಜೆಡಿಎಸ್‌ನವರೇ ಬಡಿದಾಡ್ತಿದ್ದಾರೆ. ಕಾಂಗ್ರೆಸ್‌ನ ಅತೃಪ್ತರು ಬಿಜೆಪಿ ಸೇರುವ ಬಗ್ಗೆ ಹೇಳಿದರೆ, ನಾವು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು

click me!