ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಬಿಟ್ಟು ನಮ್ಮಲ್ಲಿ ಯಾವ ರಾಹು, ಕೇತು, ಶನಿ ಇಲ್ಲ ಎಂದು ಹೇಳುವ ಮೂಲಕ ಸಚಿವ ಪುಟ್ಟರಾಜು ಪೇಚಿಗೆ ಸಿಲುಕಿದರು.
ಬೆಂಗಳೂರು (ಅ. 02): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡುವ ಭರದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ತಮ್ಮದೇ ಪಕ್ಷದ ವರಿಷ್ಠರನ್ನು ಟೀಕಿಸಿ ಮುಜುಗರಕ್ಕೀಡು ಮಾಡಿದ ಸಂಗತಿ ನಡೆದಿದೆ.
ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಬಿಟ್ಟು ನಮ್ಮಲ್ಲಿ ಯಾವ ರಾಹು, ಕೇತು, ಶನಿ ಇಲ್ಲ ಎಂದು ಹೇಳುವ ಮೂಲಕ ಸಚಿವ ಪುಟ್ಟರಾಜು ಪೇಚಿಗೆ ಸಿಲುಕಿದರು.
ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜತೆ ಮಾತನಾಡುವ ವೇಳೆ ಯಡಿಯೂರಪ್ಪನವರು ‘ಜೆಡಿಎಸ್ನಲ್ಲಿ ರಾಹು, ಕೇತು, ಶನಿ ಇದ್ದಾರೆ ಎಂದಿದ್ದಾರಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟ್ಟರಾಜು ಅವಾಂತರ ಮಾಡಿದರು.
ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ ಮಾತು ಬದಲಿಸಿ, ‘ಬಿಜೆಪಿಯಲ್ಲಿಯೇ ರಾಹು, ಕೇತು, ಶನಿ ಇದೆ. ಯಡಿಯೂರಪ್ಪ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ದೈವಾಂಶ ಸಂಭೂತರು’ ಎಂದು ಹಾಡಿ ಹೊಗಳುವ ಮೂಲಕ ಮರೆಮಾಚುವ ಪ್ರಯತ್ನ ಮಾಡಿದರು.