ಉ.ಪ್ರ. ಬಿಹಾರ ಉಪಚುನಾವಣೆ: ಜೆಡಿಎಸ್‌ಗೆ ನೈತಿಕ ಬಲ

By Suvarna Web DeskFirst Published Mar 15, 2018, 9:42 AM IST
Highlights

ಪ್ರಾದೇಶಿಕ ಅಸ್ಮಿತೆ, ಹಿತಾಸಕ್ತಿಯನ್ನು ಪ್ರಾದೇಶಿಕ ಪಕ್ಷಗಳಷ್ಟೇ ಕಾಪಾಡಲು ಸಾಧ್ಯ ಎಂಬುದನ್ನು ಉತ್ತರ ಪ್ರದೇಶ, ಬಿಹಾರ ಲೋಕಸಭಾ ಉಪಚುನಾವಣೆಯ ಫಲಿತಾಂಶ ಸ್ಪಷ್ಟ ಉದಾಹರಣೆಯಾಗಿದ್ದು, ರಾಜ್ಯದ ಜನತೆಯೂ ಅದೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ಪ್ರಾದೇಶಿಕ ಅಸ್ಮಿತೆ, ಹಿತಾಸಕ್ತಿಯನ್ನು ಪ್ರಾದೇಶಿಕ ಪಕ್ಷಗಳಷ್ಟೇ ಕಾಪಾಡಲು ಸಾಧ್ಯ ಎಂಬುದನ್ನು ಉತ್ತರ ಪ್ರದೇಶ, ಬಿಹಾರ ಲೋಕಸಭಾ ಉಪಚುನಾವಣೆಯ ಫಲಿತಾಂಶ ಸ್ಪಷ್ಟ ಉದಾಹರಣೆಯಾಗಿದ್ದು, ರಾಜ್ಯದ ಜನತೆಯೂ ಅದೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ, ಬಿಹಾರದಲ್ಲಿ ನಡೆದ ಲೋಕಸಭಾ ಉಪಚುನಾವಣೆ ಫಲಿತಾಂಶದ ಬಳಿಕ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎರಡು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಹೆಚ್ಚುತ್ತಿದೆ. ಪ್ರಾದೇಶಿಕ ಅಸ್ಮಿತೆ, ಹಿತಾಸಕ್ತಿಯನ್ನು ಪ್ರಾದೇಶಿಕ ಪಕ್ಷಗಳಷ್ಟೇ ಕಾಪಾಡಬಲ್ಲವು ಎಂಬುದನ್ನು ಸ್ಪಷ್ಟಉದಾಹರಣೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿಯೂ ಜನತೆ ಇಂತಹ ನಿರ್ಧಾರ ಕೈಗೊಳ್ಳಲಿದ್ದಾರೆ. ನಾಡಿನ ಸಮಸ್ಯೆ, ಹಿತಾಸಕ್ತಿ ರಕ್ಷಣೆ, ವಿಚಾರಗಳ ಆಧಾರದಲ್ಲಿ ಈ ಬಾರಿ ಜೆಡಿಎಸ್‌ಗೆ ಜನಮನ್ನಣೆ ಸಿಗಲಿದೆ. ಬಹುಮತದ ಹಾದಿಯಲ್ಲಿ ಸಾಗಿರುವ ಜೆಡಿಎಸ್‌ಗೆ ಉತ್ತರ ಪ್ರದೇಶ, ಬಿಹಾರದ ಉಪಚುನಾವಣೆ ಫಲಿತಾಂಶ ನೈತಿಕ ಬಲ ತಂದುಕೊಟ್ಟಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಗೆಲುವಿಗೆ ಒತ್ತಾಸೆಯಾಗಿದ್ದು, ದಲಿತ ನಾಯಕಿ ಮಾಯಾವತಿ ಅವರ ಬಿಎಸ್‌ಪಿ ಬೆಂಬಲ. ರಾಜ್ಯದಲ್ಲಿಯೂ ಜೆಡಿಎಸ್‌ಗೆ ಬಿಎಸ್‌ಪಿ ಬೆಂಬಲ ಘೋಷಿಸಿದೆ. ಹೀಗಾಗಿ ರಾಜ್ಯದಲ್ಲಿ ಜೆಡಿಎಸ್‌ ಮುಂದಿನ ದಿನದಲ್ಲಿ ಬಹುಮತ ಗಳಿಸಿ ಸರ್ಕಾರ ರಚನೆ ಮಾಡುವುದು ವಿಧಿ ಲಿಖಿತ ಎಂದು ತಿಳಿಸಿದ್ದಾರೆ.

ಬಿಜೆಪಿಯನ್ನು ಎದುರಿಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್‌ ಜನರಿಂದ ಸಂಪೂರ್ಣ ತಿರಸ್ಕಾರಕ್ಕೆ ಗುರಿಯಾಗಿ ಹೀನ ಸ್ಥಾನದಲ್ಲಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್‌ ಜನರ ತಿರಸ್ಕಾರಕ್ಕೆ ಪಾತ್ರವಾಗುವುದು ಶತಃಸಿದ್ಧ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

click me!