
ಹೊಸವರ್ಷದ ದಿನದ ರಾತ್ರಿಯಿಂದಲೂ ನಾಪತ್ತೆಯಾಗಿದ್ದ ಭಾರತೀಯ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದು, ಆಕೆಯ ದೇಹದಲ್ಲಿ ಚೂರಿಯಿಂದ ಇರಿದ ಗಾಯಗಳು ಪತ್ತೆಯಾಗಿವೆ. ತನ್ನ ಬಾಯ್ಫ್ರೆಂಡ್ನ ಅಪಾರ್ಟ್ಮೆಂಟ್ನಲ್ಲಿ ಆಕೆಯ ಶವವಾಗಿ ಪತ್ತೆಯಾಗಿದ್ದಾಳೆ. ಕೊಲೆಯಾದ ಯುವತಿಯನ್ನು 27 ವರ್ಷದ ನಿಕಿತಾ ಗೊದಿಶಾಲಾ ಎಂದು ಗುರುತಿಸಲಾಗಿದೆ. ಅಮೆರಿಕಾದ ಮೇರಿಲ್ಯಾಂಡ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹೋವರ್ಡ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ ನಿಖಿತಾ ಕೊಲಂಬಿಯಾದಲ್ಲಿರುವ ವೇದಾ ಹೆಲ್ತ್ನಲ್ಲಿ ಡಾಟಾ & ಸ್ಟ್ರೆಟಜಿ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಜನವರಿ 2 ರಂದು ಆಕೆಯ ಬಾಯ್ಫ್ರೆಂಡ್ ಅರ್ಜುನ್ ಶರ್ಮಾ ಎಂಬಾಂತ ನಾಪತ್ತೆ ದೂರು ದಾಖಲಿಸಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೊವಾರ್ಡ್ ಕೌಂಟಿ ಪೊಲೀಸರು ಜನವರಿ 2 ರಂದು ನಾಪತ್ತೆಯಾಗಿದ್ದ ಮಹಿಳೆಯೊಬ್ಬಳು ತನ್ನ ಗೆಳೆಯನ ಕೊಲಂಬಿಯಾ ಅಪಾರ್ಟ್ಮೆಂಟ್ನಲ್ಲಿ ಇರಿತದ ಗಾಯಗಳೊಂದಿಗೆ ಸಾವನ್ನಪ್ಪಿರುವುದನ್ನು ಪತ್ತೆಹಚ್ಚಿದ್ದಾರೆ ಮತ್ತು ಆರೋಪಿಯ ವಿರುದ್ಧ ಪ್ರಥಮ ಮತ್ತು ದ್ವಿತೀಯ ಹಂತದ ಕೊಲೆ ಆರೋಪಗಳ ಮೇಲೆ ಬಂಧನಕ್ಕೆ ವಾರಂಟ್ ಪಡೆದಿದ್ದಾರೆ ಎಂದು ಪೊಲೀಸರು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೊಲೀಸ್ ದೂರು ನೀಡಿದ ದಿನವೇ ಆರೋಪಿ ಅರ್ಜುನ್ ಶರ್ಮಾ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಡಿಸೆಂಬರ್ 31 ರಂದು ಸಂಜೆ 7 ಗಂಟೆಯ ನಂತರ ಅರ್ಜುನ್ ಶರ್ಮಾ, ನಿಕಿತಾ ಗೋದಿಶಾಲಾಳನ್ನು ಕೊಂದಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಪತ್ತೆ ಮಾಡಿದ್ದಾರೆ. ಘಟನೆಯ ಬಳಿಕ ಪರಾರಿಯಾಗಿರುವ ಶರ್ಮಾ ಅವರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಯುನೈಟೆಡ್ ಸ್ಟೆಟ್ಸ್ ಫೆಡರಲ್ ಕಾನೂನು ಜಾರಿ ಸಂಸ್ಥೆಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಖಾತೆಗೆ ತಪ್ಪಾಗಿ ಬಂದು ಬಿದ್ದ 40 ಕೋಟಿ ಬಳಸಿ 20 ನಿಮಿಷದಲ್ಲಿ 1.75 ಕೋಟಿ ಲಾಭ ಪಡೆದ ಟ್ರೇಡರ್!
ಅಮೆರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿಕಿತಾ ಗೋದಿಶಾಲ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಾಧ್ಯವಿರುವ ಎಲ್ಲಾ ಕಾನ್ಸುಲರ್ ಸಹಾಯವನ್ನು ನೀಡುತ್ತಿದೆ ಎಂದು ತಿಳಿಸಿದೆ. ಈ ವಿಚಾರದ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯದಲ್ಲಿ ಇರುವುದಾಗಿ ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಸುಳ್ಯದ ಪೋರನ ಕ್ರಿಕೆಟ್ ಕಾಮೆಂಟರಿಗೆ ಮನಸೋತ ನೆಟ್ಟಿಗರು: ಕನ್ನಡ, ಇಂಗ್ಲೀಷ್ನಲ್ಲಿ ಸೊಗಸಾದ ವೀಕ್ಷಕ ವಿವರಣೆ
ಭಾರತ ಮತ್ತು ಅಮೆರಿಕ ನಡುವೆ ಗಂಭೀರ ಕ್ರಿಮಿನಲ್ ಆರೋಪಗಳಲ್ಲಿ ಸಹಕರಿಸಲು ಅವಕಾಶ ನೀಡುವ ಹಸ್ತಾಂತರ ಒಪ್ಪಂದವಿದೆ. ಆದಾಗ್ಯೂ, ಈ ಪ್ರಕ್ರಿಯೆಯು ಸಾಮಾನ್ಯವಾಗಿ ನ್ಯಾಯಾಲಯದ ಪರಿಶೀಲನೆಗಳು ಮತ್ತು ರಾಜತಾಂತ್ರಿಕ ಸಮನ್ವಯವನ್ನು ತೆಗೆದುಕೊಳ್ಳುತ್ತದೆ, ಇದಕ್ಕೆ ತಿಂಗಳುಗಳ ಕಾಲ ಹಿಡಿಯುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.