
ಬೆಂಗಳೂರು: ದೇಶದಲ್ಲಿ ವರ್ಷಕ್ಕೆ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.50 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ಅಪಘಾತಗಳಿಂದ ದೇಶಕ್ಕೆ 60 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆತಂಕ ವ್ಯಕ್ತಪಡಿಸಿದರು.
2020ರ ವೇಳೆಗೆ ಈ ಅಪಘಾತದ ಪ್ರಮಾಣವನ್ನು ಶೇ.50ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಪಘಾತ ತಡೆಗೆ ಹಲವು ಸುರಕ್ಷತಾ ಕ್ರಮಗಳನ್ನು ರೂಪಿಸಿದ್ದರೂ ಪ್ರಕರಣಗಳು ಕಡಿಮೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ಅಂಡರ್'ರೈಟರ್ಸ್ ಲ್ಯಾಬೊರೇಟರಿ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅಧ್ಯಯನ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರಸ್ತೆ ಅಪಘಾತಗಳಲ್ಲಿ ಕುಟುಂಬದ ಮುಖ್ಯಸ್ಥ ಮೃತಪಟ್ಟಲ್ಲಿ ಆತನ ಇಡೀ ಕುಟುಂಬ ಸಂಕಷ್ಟಕ್ಕೆ ಗುರಿಯಾಗುತ್ತದೆ. ರಸ್ತೆ ಸುರಕ್ಷತೆಗೆ ಹಲವು ಕಾನೂನು-ನಿಯಮ ರೂಪಿಸಿದ್ದರೂ ಪಾಲನೆ ಯಾಗುತ್ತಿಲ್ಲ. ಎಷ್ಟೇ ಕಠಿಣ ನಿಯಮ ರೂಪಿಸಿದರೂ ಸಾರ್ವಜನಿಕರ ಸಹಕಾರವಿಲ್ಲದೆ ಅದನ್ನು ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದರು.
ನಿಮ್ಹಾನ್ಸ್ ನಿರ್ದೇಶಕ ಪ್ರೊ.ಬಿ.ಎನ್. ಗಂಗಾಧರ್ ಮಾತನಾಡಿ, ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿತ್ಯ ಗಾಯಾಳುಗಳು ನಿಮ್ಹಾನ್ಸ್'ಗೆ ಬರುತ್ತಾರೆ. ಅವರಿಗೆ ತುರ್ತು ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ರಾಜ್ಯ ಸರ್ಕಾರ ‘ಕಾಂಪ್ರೆಹೆನ್ಸೀವ್ ಟ್ರಾಮಾ ಕೇರ್' ಆರಂಭಿಸಲು ನಿಮ್ಹಾನ್ಸ್'ಗೆ ಬೆಂಗಳೂರು ಉತ್ತರದಲ್ಲಿ 30 ಎಕರೆ ಜಾಗ ನೀಡಿದ್ದು, ಶೀಘ್ರದಲ್ಲೇ ಟ್ರಾಮಾ ಕೇರ್ ಆರಂಭಿಸಲಾಗುವುದು ಎಂದರು. ದ್ವಿಚಕ್ರ ವಾಹನ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವಲ್ಲಿ ನಿಮ್ಹಾನ್ಸ್ ಸಂಶೋಧನೆ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಯುಎಲ್ ಸಂಸ್ಥೆಯ ಸಾರ್ವಜನಿಕ ಸುರಕ್ಷತೆ ವಿಭಾಗದ ಉಪಾಧ್ಯಕ್ಷ ಆರ್.ಎ. ವೆಂಕಟಾಚಲಂ, ನಿಮ್ಹಾನ್ಸ್ ಸಾರ್ವಜನಿಕ ಸ್ವಾಸ್ಥ್ಯ ಕೇಂದ್ರದ ಮುಖ್ಯಸ್ಥ ಡಾ.ಜಿ. ಗುರುರಾಜ್, ರಿಜಿಸ್ಟಾರ್ ಪ್ರೊ. ಶೇಖರ್ ಇದ್ದರು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.