ಬೆಂಗಳೂರಿಗರೇ ಎಚ್ಚರ : ನಿಮ್ಮ ಮನೆಗೂ ನೀರು ಪೂರೈಕೆ ನಿಲ್ಲಬಹುದು!

By Web DeskFirst Published Mar 27, 2019, 7:32 AM IST
Highlights

ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಪೂರೈಕೆ ಮಿತಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ.
 

ಬೆಂಗಳೂರು :  ನಗರದಲ್ಲಿ ಇದುವರೆಗೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಪೂರೈಕೆ ಮಿತಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್‌ಎಸ್‌ಬಿ) ಚಿಂತನೆ ನಡೆಸಿದೆ.

ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಜಲಮಂಡಳಿ ನೀರಿನ ಮಿತ ಬಳಕೆ, ಮಳೆ ನೀರು ಕೊಯ್ಲು ಹಾಗೂ ತ್ಯಾಜ್ಯ ನೀರಿನ ಮರುಬಳಕೆ ವಿಧಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಜಲದಿನದ ಸಂದರ್ಭದಲ್ಲಿ ಕೆಲ ಚಿಂತನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಜಲಮಂಡಳಿಯ ಅಧಿಕಾರಿಗಳು ಹೇಳುತ್ತಾರೆ.

ನಗರದಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿರುವ ಕಟ್ಟಡಗಳ ಸುಸ್ಥಿತಿಯ ಬಗ್ಗೆ ಆಯಾ ಪ್ರದೇಶಗಳ ರೆಸಿಡೆನ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌(ಆರ್‌ಡಬ್ಲೂಎ) ಸಹಯೋಗದೊಂದಿಗೆ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುವುದು. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಅಪಾರ್ಟ್‌ಮೆಂಟ್‌ಗಳಿಗೆ ವಾಲ್‌್ವಗಳ ಮೂಲಕ ಕಾವೇರಿ ನೀರು ಪೂರೈಕೆ ಮಿತಗೊಳಿಸಲು ಚಿಂತಿಸಲಾಗಿದೆ. ಬಿಬಿಎಂಪಿ ನಿರ್ಮಿತ ಉದ್ಯಾನಗಳಿಗೆ ಇನ್ನು ಮುಂದೆ ಜಲಮಂಡಳಿ ಸಂಸ್ಕರಿತ ನೀರನ್ನು ಪೂರೈಸಲಾಗುವುದು. ಅವೈಜ್ಞಾನಿಕವಾಗಿ ಕೊಳವೆ ಬಾವಿ ಕೊರೆದು ಉದ್ಯಾನಗಳಿಗೆ ನೀರು ಹಾಯಿಸುತ್ತಿದ್ದರೆ ಅದನ್ನು ಸ್ಥಗಿತಗೊಳಿಸಿ, ಉದ್ಯಾನಗಳಿಗೆ ಎಸ್‌ಟಿಪಿ ಅಳವಡಿಸಿಕೊಂಡಿರುವ ಅಪಾರ್ಟ್‌ಮೆಂಟ್‌ನಿಂದ ಸಂಸ್ಕರಿತ ನೀರು ಪಡೆಯಲು ಕೊಳವೆ ವ್ಯವಸ್ಥೆ ಮಾಡಿಕೊಳ್ಳುವಂತೆ ಬಿಬಿಎಂಪಿಗೆ ಸೂಚಿಸುವುದಾಗಿ ಜಲಮಂಡಳಿಯ ಅಧಿಕಾರಗಳು ತಿಳಿಸಿದ್ದಾರೆ.

ತಜ್ಞರ ಸಮಿತಿಗೆ ನೇಮಕ

ಒಂದು ವರ್ಷದ ಅವಧಿಯಲ್ಲಿ ಗಣನೀಯವಾಗಿ ನೀರು ಬಳಕೆ ಕಡಿಮೆ ಮಾಡಿರುವ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಗುರುತಿಸಿ ತಜ್ಞರ ಸಮಿತಿಗೆ ಸೇರಿಸಿಕೊಳ್ಳಲಾಗುವುದು. ನೀರಿನ ಮಿತ ಬಳಕೆಗೆ ಅನುಸರಿಸಿದ ವಿಧಾನಗಳನ್ನು ಇತರರಿಗೆ ತಿಳಿಸಲು ಕಮ್ರ ಕೈಗೊಳ್ಳಲಾಗುವುದು. ಜಲಮಂಡಳಿಯಿಂದ ಗೃಹಬಳಕೆ ಉದ್ದೇಶಕ್ಕೆ ಅನುಮತಿ ಪಡೆದು ಕೊರೆಸಿರುವ ಕೊಳವೆ ಬಾವಿಯ ನೀರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಟ್ಯಾಂಕರ್‌ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಹಾಗೂ ಅವರ ಲೈಸೆನ್ಸ್‌ ರದ್ಧತಿಗೆ ಕೋರುವುದಾಗಿ ಅವರು ಹೇಳಿದರು.

click me!