ವ್ಯವಸ್ಥೆ ಸರಿಪಡಿಸದಿದ್ದರೆ ದೇಶ ಮುಂದೆ ಅಧೋಗತಿಗೆ

By Suvarna Web DeskFirst Published Jan 12, 2018, 7:42 PM IST
Highlights

ದೇಶದ ಅಭಿವೃದ್ಧಿಗೆ ಪೂರಕ ಚಿಂತನೆ ಆಗಬೇಕಿದೆ.ಎರಡೂ ರಾಷ್ಟ್ರೀಯ ಪಕ್ಷಗಳು ದ್ವೇಷದ ದಳ್ಳುರಿಗೆ ತಳ್ಳುವ ಕಾರ್ಯ ಬಿಡಬೇಕಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯಬಾರದ ಘಟನೆ ನಡೆದಿದೆ.

ಬೆಂಗಳೂರು(ಜ.12): ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ದೇಶ ಮುಂದೆ ಅಧೋಗತಿಗೆ ಹೋಗಬಹುದು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸುದ್ದಿಗೋಷ್ಠಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ನಡೆದುಕೊಳ್ಳುವ ನೀತಿ ನೋಡಿದರೆ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದೆ ಎನಿಸುತ್ತಿದೆ. ಜಾತ್ಯಾತೀತ ದೇಶ ಎನ್ನುತ್ತೇವೆ. ಆದರೆ ನಡೆಯುತ್ತಿರುವ ಘಟನೆ, ಆಗುತ್ತಿರುವ ಚರ್ಚೆ ನೋಡಿದರೆ ದೇಶದ ಅಧೋಗತಿಗೆ ನಾವೇ ವೇದಿಕೆ ಸಿದ್ಧ ಮಾಡುತ್ತಿದ್ದೇವೆ. ವ್ಯವಸ್ಥಿತ ಸಂಚಿನಿಂದ ರಾಷ್ಟ್ರೀಯ ಪಕ್ಷಗಳಿಗೆ ನಷ್ಟವಾಗುತ್ತಿಲ್ಲ. ಅಮಾಯಕರು ತೊಂದರೆಯಲ್ಲಿ ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ' ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಪೂರಕ ಚಿಂತನೆ ಆಗಬೇಕಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ದ್ವೇಷದ ದಳ್ಳುರಿಗೆ ತಳ್ಳುವ ಕಾರ್ಯ ಬಿಡಬೇಕಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯಬಾರದ ಘಟನೆ ನಡೆದಿದೆ. ಶತಮಾನಗಳಿಂದ ನ್ಯಾಯಾಂಗದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಆಸ್ಪದ ಇರಲಿಲ್ಲ.ರಾಜಕೀಯ ಪಕ್ಷಗಳು, ಅಧಿಕಾರಿಗಳ ವಿಚಾರದಲ್ಲಿ ನಡೆಯುತ್ತಿದ್ದ ಘರ್ಷಣೆ, ಈಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗಿದೆ' ಎಂದು ತಿಳಿಸಿದರು.

ಕರ್ನಾಟಕದಲ್ಲಿ ಒಮ್ಮೆ ಹೈಕೋರ್ಟ್ ನ್ಯಾಯಾಧೀಶರು, ಭಾರತೀಯ ವಿದ್ಯಾಭವನದಲ್ಲಿ ಮಾತನಾಡುವಾಗ ಆಕ್ರೋಶದಿಂದಲೇ ಮಾತನಾಡಿದ್ದರು. ಈ ವ್ಯವಸ್ಥೆ ಹಾಳಾಗುವ ಮುನ್ನ ಕ್ರಮ ಕೈಗೊಳ್ಳಿ ಎಂದಿದ್ದೆ. ನ್ಯಾಯಾಲಯಗಳ ತೀರ್ಪನ್ನು ಕೊಂಡುಕೊಳ್ಳುವ ವ್ಯವಸ್ಥೆ ಆರಂಭವಾಗಿದೆ ಎಂದು ಅವಲತ್ತು ತೋಡಿಕೊಂಡಿದ್ದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ಮಾಧ್ಯಮದ ಮುಂದೆ ಬಂದಿದ್ದಾರೆ. ಮುಖ್ಯನ್ಯಾಯಾಧೀಶರಿಗೆ ಬರೆದ ಪತ್ರವನ್ನು ಬಹಿರಂಗ ಮಾಡಿದ್ದಾರೆ. ತಕ್ಷಣ ಕೇಂದ್ರ ಸರ್ಕಾರ ಅಥವಾ ರಾಷ್ಟ್ರಪತಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಬಡವರಿಗೆ ನ್ಯಾಯಾಲಯದಲ್ಲಿ ಅನುಕೂಲ ಆಗಲ್ಲ. ಶ್ರೀಮಂತರಿಗಷ್ಟೇ ಎಂಬ ಭಾವನೆ ಬರುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

click me!