ಹರ್ಯಾಣದ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಪಠಣ ಕಡ್ಡಾಯ

By Suvarna Web DeskFirst Published Feb 26, 2018, 9:48 AM IST
Highlights

ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ‘ಗಾಯತ್ರಿ ಮಂತ್ರ’ ಪಠಣವನ್ನು ಜಾರಿಗೊಳಿಸಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ಚಂಡೀಗಢ: ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ‘ಗಾಯತ್ರಿ ಮಂತ್ರ’ ಪಠಣವನ್ನು ಜಾರಿಗೊಳಿಸಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧರಿಸಿದೆ.

ರಾಜ್ಯದ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು ಮತ್ತು ಇತರರೊಂದಿಗೆ ಇತ್ತೀಚೆಗಷ್ಟೇ ನಡೆಸಿದ ಸಭೆಯಲ್ಲಿ ಹಿಂದೂ ಧರ್ಮದ ಮಹಾಗ್ರಂಥಗಳಲ್ಲಿ ಒಂದಾದ ಋಗ್ವೇದದಲ್ಲಿರುವ ಗಾಯತ್ರಿ ಮಂತ್ರ ಪಠಣ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆಯೇ (ಫೆ.27) ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಲ್ಲಿ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ತಿಳಿಸಿದ್ದಾರೆ.

ಆದರೆ, ಈ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿರುವ ದುರಾಡಳಿತ, ಶಿಕ್ಷಣ, ಆರೋಗ್ಯ ಮತ್ತು ಕೃಷಿ ವಲಯಗಳ ಸಮಸ್ಯೆಗಳನ್ನು ಮುಚ್ಚಿಹಾಕಲು ಸರ್ಕಾರ ಜನರ ದೃಷ್ಟಿಯನ್ನು ಬೇರೆಡೆ ಸೆಳೆಯುವ ಸರ್ಕಾರದ ಯತ್ನವಿದು ಎಂದು ಕಾಂಗ್ರೆಸ್ ಮುಖಂಡ ಅಫ್ತಾಬ್ ಅಹ್ಮದ್ ದೂರಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ಕೇಸರೀಕರಣದ ಯತ್ನವೇ ಇದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಚಿವ ರಾಮ್ ಬಿಲಾಸ್ ಶರ್ಮಾ, ‘ಮುಂಜಾನೆ ಸೂರ್ಯನ ಕಿರಣಗಳು ಕೇಸರಿಮಯವಾಗಿಯೇ ಇರುತ್ತವೆ. ತ್ರಿವರ್ಣ ಧ್ವಜದಲ್ಲಿ ಮೊದಲಿಗೆ ಕೇಸರಿಯೇ ಇದೆ. ಇದರಲ್ಲಿ ತಪ್ಪೇನಿದೆ,’ ಎಂದು ಮರು ಪ್ರಶ್ನಿಸಿದ್ದಾರೆ.

click me!