
ಬೆಂಗಳೂರು(ಮಾ.02): ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗೋವಿಂದರಾಜು ಡೈರಿಯಲ್ಲಿ ಈ ಯೋಜನೆಗಾಗಿ 65 ಕೋಟಿ ಕಪ್ಪ ಕೊಡಲಾಗಿದೆ ಎಂದು ಬರೆಯಲಾಗಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಈಗ ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ಕೈ ಬಿಡುವ ನಿರ್ಧಾರಕ್ಕೆ ಸರ್ಕಾರ ಸಜ್ಜಾಗಿದೆ. ಈ ಕುರಿತಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಯೋಜನೆಗೆ ಜನರಿಂದಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಹಠ ಬಿಡದ ರಾಜ್ಯ ಸರ್ಕಾರ ಸ್ಟೀಲ್ ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಗೋವಿಂದರಾಜು ಡೈರಿಯಲ್ಲಿ ಬಹಿರಂಗವಾದ ಕಪ್ಪ ವಿಚಾರದ ಬೆಳವಣಿಗೆಯ ಬಳಿಕ ಇಂತಹುದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನೂ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.
ಸ್ಟೀಲ್ ಫ್ಲೈ ಓವರ್ ಯೋಜನೆ ಅತ್ಯಂತ ವಿವಾದಿತ ಯೋಜನೆಯಾಗಿತ್ತು. 1800 ಕೋಟಿ ವೆಚ್ಚದ ದೇಶದ ಅತ್ಯಂತ ದುಬಾರಿ ಬ್ರಿಡ್ಜ್ ಎಂಬ ಕುಖ್ಯಾತಿ ಯನ್ನೂ ಪಡೆದಿತ್ತು. ಇದಕ್ಕಾಗಿ ಹಲವಾರು ಪ್ರತಿಭಟನೆ ಹಾಗೂ ಹೋರಾಟಗಳೂ ನಡೆದಿದ್ದವು. ಸಿಟಿಜನ್ ಫೋರಂ ಎಂಬ ವೇದಿಕೆ ಕಟ್ಟಿಕೊಂಡು ಬೆಂಗಳೂರಿನ ನಾಗರಿಕರು, 800 ಮರಗಳನ್ನು ಕಡಿಯಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು, ನಮ್ಮ ಬೆಂಗಳೂರು ಫೌಂಡೇಷನ್ ಕೂಡಾ ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್'ನ ಹಸಿರು ಪೀಠಕ್ಕೂ ಅರ್ಜಿ ಸಲ್ಲಿಸಿತ್ತು. ಇಷ್ಟೆಲ್ಲಾ ನಡೆದಿದ್ದರೂ ಹಠ ಬಿಡದ ಸರ್ಕಾರ ಸ್ಟೀಲ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಎಲ್'ಎನ್'ಟಿ ಕಂಪೆನಿಯೊಂದಿಗೆ ಟೆಂಡರ್'ನ್ನು ಕೂಡಾ ನೀಡಲಾಗಿತ್ತು. ಇದಕ್ಕಾಗಿ ಕೇವಲ ಆದೇಶ ನೀಡುವುದಷ್ಟೇ ಬಾಕಿ ಇತ್ತು.
ಆದರೆ ಇಷ್ಟೆಲ್ಲ ಹೋರಾಟಕ್ಕೆ ಬಗ್ಗದ ಸರ್ಕಾರ ಇದೀಗ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ತಣ್ಣಗಾದ ಸರ್ಕಾರ ಯೋಜನೆಯನ್ನೇ ರದ್ದುಗೊಳಿಸಲು ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.