ಕಾಂಗ್ರೆಸ್ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳ ಕಡೆಗೆ ಪ್ರಯಾಣ ಬೆಳೆಸಿದ ಎಲ್ಲಾ ಪ್ರಮುಖ ಹಾಗೂ ಪ್ರಭಾವಿ ಮುಖಂಡರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.
ಬೆಂಗಳೂರು : ಈ ಹಿಂದೆ ವಿವಿಧ ಕಾರಣಗಳಿಂದ ಪಕ್ಷ ಬಿಟ್ಟುಹೋಗಿರುವ ನಾಯಕರನ್ನು ಮನವೊಲಿಸಿ ಮತ್ತೆ ಪಕ್ಷಕ್ಕೆ ವಾಪಸ್ ಕರುವ ಕೆಲಸ ಮಾಡುವಂತೆ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ನಾಯಕರು ಜಿಲ್ಲಾ ಮುಖಂಡರುಗಳಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಕಾಂಗ್ರೆಸ್ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಎಲ್ಲೆಡೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚಿಸಬೇಕಾಗಿದೆ. ಹಾಗಾಗಿ ಪಕ್ಷಕ್ಕೆ ಲಾಭವಾಗುವ ಎಲ್ಲ ನಾಯಕರನ್ನೂ ವಾಪಸ್ ಕರೆತನ್ನಿ. ಪ್ರಮುಖವಾಗಿ ತರೀಕೆರೆ ಕ್ಷೇತ್ರದ ಮಾಜಿ ಶಾಸಕ ಶ್ರೀನಿವಾಸ್, ಜಯಪ್ರಕಾಶ್ ಹೆಗ್ಡೆ, ಶಿವಶಂಕರ್ ಸೇರಿದಂತೆ ಪ್ರಮುಖರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನ ನಡೆಸುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಚಾಟಿ ಬೀಸಿದ ವೇಣು: ವಿಧಾನಸಭಾ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಸೋಲನುಭವಿಸಿದ ವಿಷಯ ಪ್ರಸ್ತಾಪಿಸಿದ ವೇಣುಗೋಪಾಲ್, ಸ್ಥಳೀಯ ನಾಯಕರಿಗೆ ಬಿಸಿ ಮುಟ್ಟಿಸಿದರಲ್ಲದೆ, ‘ಎಲ್ಲರೂ ಮನೆಯಿಂದ ಹೊರಬಂದು ಪಕ್ಷ ಸಂಘಟಿಸುವ ಕೆಲಸ ಮಾಡಿ. ಹಿಂದೆ ಕರಾವಳಿಯಲ್ಲಿ ಕಾಂಗ್ರೆಸ್ ಬಲವಾಗಿತ್ತು.
ಈಗ ಬಲ ಕಳೆದುಕೊಂಡಿದೆ. ‘ವಿಸ್ತಾರಕ್ ’ರಿಂದ ಬಿಜೆಪಿಯವರಿಗೆ ಚುನಾವಣೆಯಲ್ಲಿ ಗೆಲ್ಲಲು ಅನುಕೂಲ ಆಯಿತು. ಅವರಂತೆ ನೀವೂ 30 ಕಾರ್ಯಕರ್ತರಿಗೆ ಒಬ್ಬ ಮುಖಂಡರನ್ನು ನೇಮಕ ಮಾಡಿಕೊಂಡು ತಳ ಮಟ್ಟದಿಂದ
ಪಕ್ಷವನ್ನು ಬಲಪಡಿಸಿ ಎಂದು ವೇಣುಗೋಪಾಲ್ ಸೂಚನೆ ನೀಡಿದರು’ ಎನ್ನಲಾಗಿದೆ.