
ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.24ರಿಂದ 26ರ ವರೆಗೆ ಮುಂಬೈ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿದ್ದು, ಈ ವೇಳೆ ಮಹದಾಯಿ ವಿವಾದ ಬಗೆಹರಿಸುವಂತೆ ಕಳಸಾ-ಬಂಡೂರಿ ಹೋರಾಟಗಾರರು ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿಗೂ ಮಹದಾಯಿ ವಿವಾದದ ಬಿಸಿ ತಟ್ಟುವುದು ಸ್ಪಷ್ಟವಾಗಿದೆ.
ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಜನಾಶೀರ್ವಾದ ಯಾತ್ರೆ ನಡೆಸಿದರೂ ರಾಹುಲ್ ಗಾಂಧಿ ಮಹದಾಯಿ ವಿಷಯ ಪ್ರಸ್ತಾಪಿಸಲಿಲ್ಲ. ಮೂರು ದಿನಗಳ ಕಾಲ ಟೆಂಪಲ್ ರನ್ ಮಾಡಿದ್ದೇ ಜಾಸ್ತಿ. ಇದೀಗ ಮುಂಬೈ ಕರ್ನಾಟಕದ ವ್ಯಾಪ್ತಿಯಲ್ಲಿ ಸಂಚರಿಸಲಿದ್ದಾರೆ. ಜತೆಗೆ ಮಲಪ್ರಭಾ ನದಿಯ ಅಚ್ಚುಕಟ್ಟು ಪ್ರದೇಶಗಳ ಜಿಲ್ಲೆಗಳಾದ ಬೆಳಗಾವಿ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ರಾಹುಲ್ ಪ್ರವಾಸ ಮಾಡಲಿದ್ದಾರೆ. ಹೀಗಾಗಿ ಈ ವೇಳೆಯಾದರೂ ರಾಹುಲ್ ಮಹದಾಯಿ ಬಗ್ಗೆ ಪ್ರಸ್ತಾಪಿಸಲಿ ಎಂಬ ಬೇಡಿಕೆ ಹೋರಾಟಗಾರರದ್ದು.
ಇನ್ನು ಬಿಜೆಪಿ ಕೂಡ ಮಹದಾಯಿ ವಿಷಯವಾಗಿ ಕಾಂಗ್ರೆಸ್ನ ನಿಲುವೇನು ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸುತ್ತಿದೆ. ಈ ಹಿಂದೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಾಗ ಮಹದಾಯಿ ವಿಷಯ ಪ್ರಸ್ತಾಪಿಸಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿಲ್ಲವಲ್ಲ ಏಕೆ? ಮಹದಾಯಿ ಇಷ್ಟೊಂದು ಕಗ್ಗಂಟಾಗಲು ಕಾಂಗ್ರೆಸ್ ಕಾರಣ. 2007ರಿಂದಲೂ ಕಾಂಗ್ರೆಸ್ ಮಹದಾಯಿ ವಿಷಯವಾಗಿ ವಿರೋಧಿಸುತ್ತಲೇ ಬಂದಿದೆ. ಈಗ ನೋಡಿದರೆ ಬಿಜೆಪಿ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ. ಇದೀಗ ರಾಹುಲ್ ಗಾಂಧಿ ಜಿಲ್ಲೆಗೆ ಬರುತ್ತಿದ್ದಾರೆ. ಆದಕಾರಣ ಈ ವೇಳೆ ಮಹದಾಯಿ ವಿಷಯವಾಗಿ ಕಾಂಗ್ರೆಸ್ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಜಿಲ್ಲೆಗೆ ಬಂದಾಗ ಮಹದಾಯಿ ವಿಷಯ ಪ್ರಸ್ತಾಪಿಸಬೇಕು. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರೈತರಿಗಾಗಿ ಕಾಂಗ್ರೆಸ್ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಬೇಡಿಕೆಯನ್ನಿಟ್ಟುಕೊಂಡು ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕಾಗಿ ಅನುಮತಿ ಪಡೆಯುವ ಕೆಲಸ ಮಾಡುತ್ತಿದ್ದೇವೆ.
- ವೀರೇಶ ಸೊಬರದಮಠ, ಮಹದಾಯಿ ಹೋರಾಟಗಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.