
ಬೆಂಗಳೂರು : ನೀಲಗಿರಿ ಹಾಗೂ ಸರ್ವೆ ಮರಗಳು ಪರಿಸರಕ್ಕೆ ಮಾರಕವಾಗಿವೆ. ನೀಲಗಿರಿ ಬೆಳೆಯುವುದನ್ನು ಈಗಾಗಲೇ ಸರ್ಕಾರ ನಿಷೇಧಿಸಿದೆ. ಹೀಗಾಗಿ ರೈತರಿಗೆ ಇಂತಹ ಜಾಗದಲ್ಲಿ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾದ ‘ಎಲಿಫೆಂಟ್ ಬ್ಯಾಂಬೂ’ ಬೆಳೆಯಲು ಪ್ರೋತ್ಸಾಹ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.
ಬುಧವಾರ ವಿಕಾಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಅನೇಕ ಕಡೆ ನೀಲಗಿರಿ, ಸರ್ವೆ ಮರವನ್ನು ಬೆಳೆಯಲಾಗುತ್ತಿದೆ. ನೀಲಗಿರಿ ಮರದಿಂದ ಪರಿಸರದ ತೇವಾಂಶ ಕಡಿಮೆ ಆಗುತ್ತದೆ. ಆ ಜಾಗದಲ್ಲಿ ಇತರೆ ಯಾವುದೇ ಬೆಳೆ ಬೆಳೆಯಲು ಬರುವುದಿಲ್ಲ.
ಹಾಗಾಗಿ ಇದಕ್ಕೆ ಪರ್ಯಾಯವಾಗಿ ಬೇಗ ಇಳುವರಿ ಬರುವ, ಮುಳ್ಳು ಇಲ್ಲದ ‘ಎಲಿಫೆಂಟ್ ಬ್ಯಾಂಬೂ’ (ಆನೆ ಬಿದಿರು) ಬೆಳೆಸಲು ಯೋಚಿಸಲಾಗಿದೆ ಎಂದರು. ಮೊದಲ ಎರಡು ವರ್ಷಗಳಲ್ಲಿ ಹನಿ ನೀರಾವರಿ ಮೂಲಕ ಬೆಳೆಸಬೇಕಾಗುತ್ತದೆ. ಮೂರು ವರ್ಷಗಳಲ್ಲಿ ಬೆಳೆಯುವ ಈ ಬಿದಿರು ಸುಮಾರು 25 - 30 ವರ್ಷ ಇಳುವರಿ ಕೊಡಲಿದೆ. ಒಂದು ಎಕರೆ ಭೂಮಿಯಲ್ಲಿ ಬೆಳೆಯುವ ಬಿದಿರಿನಿಂದ ವರ್ಷಕ್ಕೆ ಮೂರರಿಂದ ಮೂರೂವರೆ ಲಕ್ಷ ರು. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.