
ನವದೆಹಲಿ(ಅ.12): ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಮುಖಂಡರು ಮತ್ತು ಪಕ್ಷಗಳು ಮತದಾರರನ್ನು ತಲುಪುವ ಪ್ರಯತ್ನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ಸಂದೇಶಗಳು ಜನರ ಖಾಸಗಿತನಕ್ಕೆ ತೊಂದರೆಯಾಗಬಾರದು ಎಂದು ಆಯೋಗ ಎಚ್ಚರಿಕೆ ನೀಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ರಾಜಕೀಯ ಪಕ್ಷಗಳಾಗಲಿ, ಅಭ್ಯರ್ಥಿಗಳಾಗಲಿ ಮತದಾರರಿಗೆ ಕರೆ ಮಾಡುವುದು, ಸಂದೇಶ ಕಳುಹಿಸುವುದು, ವಾಟ್ಸಾಪ್ ಮಾಡುವುದು ಇತ್ಯಾದಿಗಳನ್ನು ಮಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.
ನಾಗರಿಕರ ಖಾಸಗಿತನವನ್ನು ಗೌರವಿಸಿ ಅವರ ಜೀವನಕ್ಕೆ ತೊಂದರೆ ನೀಡಬಾರದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಮನೆ ಮನೆಗೆ ತೆರಳುವುದು ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಕೂಡ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಸುವುದಕ್ಕೆ ಆಯೋಗ ನಿಷೇಧ ಹೇರಿದೆ.
ಸುದ್ದಿ ಮಾಧ್ಯಮಗಳು ರಾಜಕೀಯ ನಾಯಕರ ರೊಚ್ಚಿನ ಭಾಷಣಗಳನ್ನು ಅಥವಾ ಇತರ ಜಿಗುಪ್ಸೆ ಹುಟ್ಟಿಸುವ ರಾಜಕೀಯ ನಾಯಕರ ಮಾತುಗಳನ್ನು ಬಿತ್ತರಿಸಬಾರದು, ಇದರಿಂದ ಸಮಾಜದಲ್ಲಿ ಹಿಂಸೆ ಉಂಟಾಗಿ ಸಾರ್ವಜನಿಕರ ಶಾಂತಿಯುತ ಜೀವನಕ್ಕ ಧಕ್ಕೆಯುಂಟಾಗಬಹುದು, ಗಲಾಟೆ ಏಳುವ ಸಾಧ್ಯತೆಯಿದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.
ಜನರಲ್ಲಿ ದ್ವೇಷ, ಶತ್ರುಭಾವನೆ ಹುಟ್ಟಿಸುವ ಭಾಷಣಗಳನ್ನು ಸುದ್ದಿ ಮಾಧ್ಯಮಗಳು ಕಡ್ಡಾಯವಾಗಿ ಪ್ರಸಾರ ಮಾಡಬಾರದು, ಜಾತಿ, ಧರ್ಮ, ಪಂಥ, ಸಮುದಾಯ, ನಿರ್ದಿಷ್ಟ ಜನಾಂಗ, ಭಾಷೆಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಜನರ ಭಾವನೆಗಳನ್ನು ಪ್ರಚೋದಿಸುವ ಸುದ್ದಿಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡದಂತೆ ಆಯೋಗ ಸುದ್ದಿ ಮಾಧ್ಯಮಗಳಿಗೆ ತಾಕೀತು ಮಾಡಿದೆ.
ಇದೇ ವೇಳೆ ಚುನಾವಣೋತ್ತರ ಫಲಿತಾಂಶಗಳು, ವಿಶ್ಲೇಷಣೆಗಳು, ಚರ್ಚೆಗಳು, ದೃಶ್ಯಗಳು ಮತ್ತು ಯಾರದ್ದಾದರೂ ಅಭಿಪ್ರಾಯಗಳು ಆಯೋಗ ಹೊರಡಿಸಿದ ಮಾರ್ಗಸೂಚಿಯ ಒಳಗೆಯೇ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.