
ಬೆಂಗಳೂರು (ಡಿ.22): ಶ್ರವಣದೋಷವುಳ್ಳ ಪದವಿ ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆಗಳ ಮೇಲೆ ಹಸಿರು ಬಣ್ಣದ ಸ್ಟಿಕ್ಕರ್ ಅಂಟಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಗುರುವಾರ ನಡೆಸಿದ 19ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಭಾಷಾ ಸಮಸ್ಯೆ ಎದುರಿಸಲಿದ್ದಾರೆ. ವ್ಯಾಕರಣ, ವಾಕ್ಯ ರಚನೆ ದೋಷಗಳು ಸೇರಿದಂತೆ ವಿವಿಧ ಲೋಪದೋಷಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮೌಲ್ಯಮಾಪಕರು ಇಂತಹ ಉತ್ತರ ಪತ್ರಿಕೆಗಳನ್ನು ಬಹಳ ತಾಳ್ಮೆಯಿಂದ ನೋಡುವಂತೆ ತಿಳಿಸುವ ಸೂಚನೆಗಾಗಿ ಸ್ಟಿಕ್ಕರ್ ಅಂಟಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಂಸ್ಥೆಯು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪದವಿ ಪರೀಕ್ಷೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸುವಂತೆ ಹಾಗೂ ಪರೀಕ್ಷಾ ನಿಯಮಗಳನ್ನು ಮಾರ್ಪಾಡು ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬದಲಾವಣೆಗೆ ವಿವಿಗಳು ಒಪ್ಪಿಗೆ ನೀಡಿವೆ.
ಕೈಗೊಂಡ ನಿರ್ಣಯಗಳು:
ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಒಂದು ಗಂಟೆ ಮೊದಲು ಪ್ರಾಂಶುಪಾಲರಿಗೆ ವರದಿ ಮಾಡಿಕೊಳ್ಳಬೇಕು. ಮೂರು ಗಂಟೆ ಅವಧಿಯ ಪ್ರಶ್ನೆ ಪತ್ರಿಕೆಗೆ ಗಂಟೆಗೆ 20 ನಿಮಿಷಗಳಂತೆ ಒಂದು ಗಂಟೆಗೂ ಹೆಚ್ಚಿನ ಕಾಲಾವಕಾಶ ನೀಡಬೇಕು. ಪರೀಕ್ಷೆ ಬರೆಯಲು ಸಹಾಯ ಮಾಡುವ ವಿದ್ಯಾರ್ಥಿಗಳು ವಿಶೇಷ ಚೇತನ ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಹತೆ ಇರಬೇಕೆಂದಿಲ್ಲ. ಆದರೆ, ಬರಹಗಾರ ಮತ್ತು ವಿಶೇಷ ಚೇತನ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಪರೀಕ್ಷೆಯಲ್ಲಿನ ವಿಷಯಗಳು ಒಂದೇ ಆಗಿರಬಾರದು. ತಾಳ್ಮೆಯಿಂದ ಮೌಲ್ಯಮಾಪನಕ್ಕಾಗಿ ಉತ್ತರ ಪತ್ರಿಕೆ ಮೇಲೆ ಹಸಿರು ಸ್ಟಿಕ್ಕರ್ ಹಾಕಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.