
ನವದೆಹಲಿ(ಸೆ.16): ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ)ಗೆ ಆಧಾರ್ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ ಚಾಲನಾ ಪರವಾನಗಿಯನ್ನು ಆಧಾರ್ ಸಂಖ್ಯೆ ಜೊತೆ ಶೀಘ್ರವೇ ಸಂಯೋಜಿಸುವ ಮಾಹಿತಿ ಈಗ ಹೊರಬಿದ್ದಿದೆ.
ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ವಿದ್ಯುನ್ಮಾನ ಸಚಿವ ರವಿಶಂಕರ್ ಪ್ರಸಾದ್ ಖುದ್ದು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ. ಆಧಾರ್ ನಿಂದ ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗಲಿದೆಯೇ ಎಂದು ಸುಪ್ರೀಂಕೋರ್ಟ್ ಇನ್ನೂ ತನ್ನ ತೀರ್ಪು ನೀಡಬೇಕಿದ್ದು, ನವೆಂಬರ್ನಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಸಚಿವರ ಹೇಳಿಕೆ ಹೊರಬಿದ್ದಿದೆ.
‘ನಾವು ಚಾಲನಾ ಪರವಾನಗಿಯನ್ನು ಆಧಾರ್ ಜೊತೆ ಸಂಯೋಜಿಸಲು ಯೋಜಿಸಿದ್ದೇವೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತುಕತೆ ನಡೆಸಲಾಗಿದೆ. ಇದು ಶೀಘ್ರ ಕೈಗೂಡುವ ನಿರೀಕ್ಷೆ ಇದೆ’ ಎಂದು ರವಿಶಂಕರ್ ಪ್ರಸಾದ್ ಅವರು ಡಿಜಿಟಲ್ ಹರ್ಯಾಣ ಶೃಂಗ- 2017ರ ಸಂದರ್ಭದಲ್ಲಿ ಹೇಳಿದರು.
ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಸಂಯೋಜನೆ ಸರ್ಕಾರದ ಕಾರ್ಯಸೂಚಿಯಲ್ಲಿದ್ದರೂ, ಅದನ್ನಿನ್ನೂ ಜಾರಿಗೊಳಿಸಲು ಈವರೆಗೆ ಮುಂದಾಗಿರಲಿಲ್ಲ. ಆದರೆ ಎರಡೆರಡು ಡ್ರೈವಿಂಗ್ ಲೈಸೆನ್ಸನ್ನು ಮಾಡಿಸಿಕೊಂಡು ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೃತ್ಯ ನಡೆಯುತ್ತಲೇ ಇವೆ. ಇದೇ ವೇಳೆ ಅಪಘಾತ ನಡೆಸಿ ಅಥವಾ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಚಾಲನಾ ಪರವಾನಗಿ ಜಪ್ತಾಗಿದ್ದರೂ ಇನ್ನೊಂದು ಡಿ.ಎಲ್. ಮಾಡಿಸಿಕೊಂಡು ಆ ಕೃತ್ಯಗಳಿಂದ ಪಾರಾಗುವ ಯತ್ನಗಳೂ ನಡೆದ ಉದಾಹರಣೆಗಳಿವೆ. ಹೀಗಾಗಿ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
57 ಸಾವಿರ ಕೋಟಿ ಉಳಿತಾಯ:
ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದ್ದರಿಂದ ಸೋರಿಕೆ ನಿಯಂತ್ರಣಕ್ಕೆ ಬಂದಿದ್ದು, ಕಳೆದ ವಿತ್ತೀಯ ವರ್ಷದಲ್ಲಿ 57 ಸಾವಿರ ಕೋಟಿ ರು. ಉಳಿತಾಯವಾಗಿದೆ ಎಂದು ರವಿಶಂಕರಪ್ರಸಾದ್ ಇದೇ ವೇಳೆ ಹೇಳಿದರು. ಅಲ್ಲದೆ, ಆಧಾರ್ ದತ್ತಾಂಶ ದುರ್ಬಳಕೆ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.