ಮತ್ತೆ ಸಿಎಂ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದಿಲ್ಲ. ನನಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಆಸೆ ಇರಬಹುದು. ಆದರೆ ಕಾಂಗ್ರೆಸಿನಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ - ಸಿದ್ದರಾಮಯ್ಯ
ಬೆಂಗಳೂರು[ಆ.24]: ಇನ್ನೊಂದು ಸಲ ಸಿಎಂ ಆಗುವುದಕ್ಕೆ ಜನರು ಆಶೀರ್ವದಿಸುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಮ್ಮದೆ ಶೈಲಿಯ ವ್ಯಾಖ್ಯಾನ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮತ್ತೆ ಸಿಎಂ ಆಗುತ್ತೇನೆಂದು ಅಪ್ಪಿತಪ್ಪಿಯೂ ಸಿದ್ದರಾಮಯ್ಯ ಅವರು ಹೇಳಿಲ್ಲ. ಹಿರಿಯ ನಾಯಕರಾದ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಧೈರ್ಯಕೊಡಲು ಆ ಹೇಳಿಕೆ ನೀಡಿರಬಹುದು. ಮತ್ತೆ ಸಿಎಂ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದಿಲ್ಲ. ನನಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಆಸೆ ಇರಬಹುದು. ಆದರೆ ಕಾಂಗ್ರೆಸಿನಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಉಹಾಪೋಹಗಳನ್ನು ತಳ್ಳಿಹಾಕಿದರು.
ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಎಚ್.ಡಿ.ದೇವೇಗೌಡ ಅವರೇ ಕಾಂಗ್ರೆಸ್ ಪಕ್ಷದಲ್ಲಿಯೇ ಯಾರಾದರೂ ಸಿಎಂ ಆಗಿ ಎಂದು ಹೇಳಿದ್ದರು. ಆದರೆ ಜೆಡಿಎಸ್ ಪಕ್ಷವೇ ಸಿಎಂ ಸ್ಥಾನ ಇಟ್ಟುಕೊಳ್ಳಿ ಎಂದು ನಾವೇ ಹೇಳಿದ್ದೆವು. ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ನಾಯಕರ ಪರಿಶ್ರಮದಿಂದಲೇ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನು ಓದಿ: ನಾನು ಇನ್ನೊಂದು ಸಲ ಸಿಎಂ ಆಗ್ತೀನಿ : ಮೇಲೆ ಇರುವವರು ಕೆಳಗೆ ಬರಲೇಬೇಕು