
ನವದೆಹಲಿ[ಅ.03]: ಮಾಜಿ ಸಂಸದೆ ರಮ್ಯಾ ಎಐಸಿಸಿ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥೆಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ತಾವೇ ಸ್ಪಷ್ಟನೆ ನೀಡಿ ರಜೆಯಲ್ಲಿದ್ದು ನಾಳೆಯೇ ಕಚೇರಿಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ 2 ದಿನಗಳ ಹಿಂದೆ ರಮ್ಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರದ ಕೆಲವು ಹಿರಿಯ ನಾಯಕರೇ ಸ್ಪಷ್ಟಪಡಿಸಿದ್ದಾರೆ. ನಟಿ ಕಮ್ ರಾಜಕಾರಣಿಯಾಗಿರುವ ರಮ್ಯಾ ಕೆಲ ತಿಂಗಳಿಂದ ಪಕ್ಷದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಮುಖ್ಯವಾಗಿ ಉನ್ನತ ನಾಯಕರು ಅ.02 ರಂದು ಮಹಾರಾಷ್ಟ್ರದ ವಾರ್ದಾದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಗೈರು ಹಾಜರಾಗಿದ್ದರು.
ಈ ಕಾರ್ಯಕ್ರಮ 2019ರ ಲೋಕಸಭಾ ಚುನಾವಣೆಗೆ ಯೋಜನೆಗಳನ್ನು ರೂಪಿಸುವುದಕ್ಕೆ ಅತೀ ಮುಖ್ಯವಾಗಿತ್ತು. ಹಲವು ತಿಂಗಳುಗಳಿಂದ ನಾಯಕಿಯ ವಿರುದ್ಧ ರಾಜ್ಯ, ರಾಷ್ಟ್ರ ನಾಯಕರು ಆಕೆಯ ಕಾರ್ಯಚಟುವಟಿಕೆ, ಕೆಲ ವರ್ತನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡುತ್ತಿರುವ ಟ್ವೀಟ್ ಗಳು, ಎಫ್ ಐಆರ್ ದಾಖಲಾದ ಪ್ರಕರಣ ಕೂಡ ಪ್ರಮುಖವಾಗಿದ್ದವು. ಇವೆಲ್ಲವುಗಳ ಜೊತೆ ತಾವು ಹೊಣೆ ಹೊತ್ತಿರುವ ಸಾಮಾಜಿಕ ಮಾಧ್ಯಮ ಘಟಕದ ಸಿಬ್ಬಂದಿಯೊಂದಿಗೂ ಕಡಿಮೆ ಸಂಪರ್ಕ ಹೊಂದಿದ್ದರು.
ಹಿರಿಯ ನಾಯಕರ ಒತ್ತಡಿಂದ ಎಐಸಿಸಿ ಅಧಿನಾಯಕ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ತಕ್ಷಣ ರಾಜೀನಾಮೆ ನೀಡಿ ತಮ್ಮ ಮೇರು ನಾಯಕನ ವಿರುದ್ಧ ಮುನಿಸಿಕೊಂಡಿದ್ದರಂತೆ. ಬೇಸರಗೊಂಡಿದ್ದ ನಾಯಕಿಯನ್ನು ಸ್ವತಃ ರಾಹುಲ್ ಗಾಂಧಿಯೇ ಓಲೈಸಿ ಪುನಃ ಮುಂದುವರಿಯುವಂತೆ ಸೂಚಿಸಿದರು ಎನ್ನಲಾಗಿದೆ. ಅದಲ್ಲದೆ ನೂತನ ಸ್ಥಾನಕ್ಕೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಅವರ ಪುತ್ರ ನಿಖಿಲ್ ಆಳ್ವ ಅವರನ್ನು ನೇಮಿಸಲಾಗಿತ್ತು. ಆದರೆ 2 ದಿನಗಳಲ್ಲಿ ಎಲ್ಲವೂ ನಡೆದು ಹೋದ ಕಾರಣ ನಿಖಿಲ್ ಅವರು ಹೊಸ ಜವಾಬ್ದಾರಿಯಿಂದ ವಂಚಿತರಾದರು.
ಈ ಸುದ್ದಿಯನ್ನು ಓದಿ: ರಮ್ಯಾ ರಾಜೀನಾಮೆ ವದಂತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.