
ಬೆಂಗಳೂರು(ಜೂ.30): ಆಗಸ್ಟ್ 15ರಿಂದ ಬೆಂಗಳೂರಿನ 198 ವಾರ್ಡ್'ಗಳಲ್ಲಿ ಇಂದಿರಾ ಕ್ಯಾಂಟೀನ್ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ಕೂಡಾ ನಡೀತಿದೆ. ಈ ಮಧ್ಯೆ ಪಾಲಿಕೆ ಬಿಡಿಎ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಲು ಮುಂದಾಗಿರೋದು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕ್ಯಾಂಟಿನ್ ನಿರ್ಮಾಣಕ್ಕೆ BDA ಅಸಮಾಧಾನ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ನಿರ್ಮಾಣ ಆರಂಭದಲ್ಲೇ ಬಿಬಿಎಂಪಿಗೆ ಹಲವು ಸವಾಲ್ ಗಳನ್ನು ತಂದೊಡ್ಡಿದೆ. ಬೆಂಗಳೂರಿನ ಸುಬ್ರಮಣ್ಯ ವಾರ್ಡ್ -66 ರಲ್ಲಿರುವ 18 ಸಾವಿರ ಚದರ ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗ್ತಿದೆ. ಆದರೆ ಈ ಜಾಗದಲ್ಲಿ ಕ್ಯಾಂಟೀನ್ ನಿರ್ಮಾಣ ಮಾಡ್ತಿರೋದು ಬಿಡಿಎ ಕೆಂಗಣ್ಣಿಗೆ ಗುರಿಯಾಗಿದೆ. ಈ ನಿವೇಶನದ ಅಂದಾಜು 200 ಕೋಟಿ ಮೌಲ್ಯದ್ದು ಅಂತಾ ಹೇಳಲಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗುವಂತಹ ನಿವೇಶನದಲ್ಲಿ ಪಾಲಿಕೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಹೊರಟಿದ್ದು ಬಿಡಿಎ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕ್ಯಾಂಟೀನ್ ನಿರ್ಮಾಣದ ಗುತ್ತಿಗೆ ಪಡೆದ ಕೆಇಎಫ್ ಇನ್ಫ್ರಾ ಸಂಸ್ಥೆ ಸಲಕರಣೆಗಳನ್ನು ಹಾಕಿದೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿರುವ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಹಾಗೂ ಹಿರಿಯ ಅಧಿಕಾರಿಗಳು ಕಾಮಗಾರಿ ಆರಂಭಿಸದಂತೆ ಪಾಲಿಕೆಗೆ ಸೂಚನೆ ನೀಡಿದೆ. ಅಲ್ಲದೆ ನಿವೇಶನದ ಒತ್ತುವರಿ ಆಗದಂತೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದೇ ಸಂಬಂಧವಾಗಿ ವಿಕಾಸಸೌಧದಲ್ಲಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ವೇಳೆ ಬದಲಿ ಜಾಗವನ್ನು ಗುರುತಿಸೋಕೆ ಕಾಲಾಕಾಶವನ್ನು ಬಿಡಿಎ ಬಳಿ ಬಿಬಿಎಂಪಿ ಕೇಳಿದೆಯಂತೆ. ಒಟ್ಟಿನಲ್ಲಿ ಬಿಬಿಎಂಪಿ ಜಾರಿಗೆ ತರಲು ಮುಂದಾಗರುವ ಇಂದಿರಾ ಕ್ಯಾಂಟೀನ್'ಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.