ಪಕ್ಷ ನೋಡಿ ಅಲ್ಲ, ವ್ಯಕ್ತಿ ನೋಡಿ ಪ್ರಚಾರ ಮಾಡ್ತೀನಿ: ದರ್ಶನ್‌

By Web DeskFirst Published Apr 9, 2019, 8:34 AM IST
Highlights

ಪಕ್ಷ ನೋಡಿ ಅಲ್ಲ, ವ್ಯಕ್ತಿ ನೋಡಿ ಪ್ರಚಾರ ಮಾಡ್ತೀನಿ: ದರ್ಶನ್‌ |  ಆಸೆ, ಆಮಿಷಗಳಿಗೆ ಬಲಿಯಾಗದೆ ಬಿಜೆಪಿ ಅಭ್ಯರ್ಥಿ ಪಿ ಸಿ ಮೋಹನ್‌ರನ್ನು ಗೆಲ್ಲಿಸುವಂತೆ ಕರೆ | 
 

ಬೆಂಗಳೂರು (ಏ. 09):  ನಾನು ಪಕ್ಷ ನೋಡಿ ಪ್ರಚಾರ ಮಾಡಲ್ಲ, ವ್ಯಕ್ತಿ ನೋಡಿ ಪ್ರಚಾರಕ್ಕೆ ಬರುತ್ತೇನೆ ಎಂದು ನಟ ದರ್ಶನ್‌ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಅವರ ಪರವಾಗಿ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಬಾರಿಯೂ ಮೋಹನ್‌ ಅವರ ಪ್ರಚಾರ ನಡೆಸಿದ್ದೆ. ನನಗೆ ವ್ಯಕ್ತಿ ಮತ್ತು ಪಕ್ಷಕ್ಕಿಂತ ಜನರ ಪರವಾಗಿ ಕೆಲಸ ಮಾಡುವವರು ಆಯ್ಕೆಯಾಗಬೇಕು ಎಂಬುದು ನನ್ನ ಮುಖ್ಯ ಉದ್ದೇಶ. ಮೋಹನ್‌ ನನ್ನ ಆತ್ಮೀಯ ಸ್ನೇಹಿತರು. ಅಂಥವರನ್ನು ಗೆಲ್ಲಿಸಿದರೆ ಬೆಂಗಳೂರಿನ ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಯಾಗುತ್ತವೆ. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಪಣ ತೊಡಬೇಕೆಂದು ಕರೆ ನೀಡಿದರು.

ಸಂಸದರು, ಶಾಸಕರಿಗಾಗಿ ಪ್ರಚಾರ ಮಾಡುವುದು ಒಂದು ಲೆಟರ್‌ಗಾಗಿ ಮಾತ್ರ. ನಮ್ಮ ಬಳಿ ಸಾಕಷ್ಟುಜನ ಸಹಾಯಕ್ಕಾಗಿ ಬರುತ್ತಾರೆ. ಆಗ ಇಂತಹವರಿಂದ ಲೆಟರ್‌ ನಿರೀಕ್ಷೆ ಮಾಡುತ್ತೇವೆ. ಇದರಿಂದ ಒಂದಷ್ಟುಜನರಿಗೆ ಸಹಾಯ ಆಗುತ್ತದೆ. ಕಳೆದ ಎರಡು ಅವಧಿಗೆ ಸಂಸದರಾಗಿ ಆಯ್ಕೆಯಾಗಿರುವ ಮೋಹನ್‌ ಅವರು ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ ನೀಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ರಸ್ತೆಗಳ ಅಗಲೀಕರಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ, ಮಹಿಳೆಯರಿಗೆ ವಿಶೇಷ ಸವಲತ್ತುಗಳು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಗಮನ ಹರಿಸಿದ್ದಾರೆ. ಇಂತಹವರನ್ನು ಆಯ್ಕೆ ಮಾಡುವುದರ ಮೂಲಕ ಬೆಂಗಳೂರಿನ ಎಲ್ಲರೂ ಕೈ ಜೋಡಿಸಬೇಕು. ಪಿ.ಸಿ.ಮೋಹನ್‌ ಅವರು ಈ ಬಾರಿ ಗೆಲ್ಲುವುದರಲ್ಲಿ ಯಾವುದೇ ಸಂಶಯವೇ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸತಿಪ್ಪಸಂದ್ರ, ಮಾರುತಿ ಸೇವಾ ನಗರ, ಸರ್ವಜ್ಞನಗರ, ಹೊಯ್ಸಳನಗರ, ಜೀವನ್‌ಭೀಮಾನಗರ, ಕೋನೆನ ಅಗ್ರಹಾರ ಸೇರಿದಂತೆ ಹಲವು ಕಡೆ ಪ್ರಚಾರ ನಡೆಸಿದರು. ದರ್ಶನ್‌ ಅವರಿಗೆ ನಟಿ ತಾರಾ ಸಾಥ್‌ ನೀಡಿದರು. ದರ್ಶನ್‌ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.

 

click me!