
ಭೋಪಾಲ್/ರಾಯ್ಪುರ: ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂಬ ಪ್ರಣಾಳಿಕೆಯಲ್ಲಿನ ಭರವಸೆಯನ್ನು ಕಾಂಗ್ರೆಸ್ ಪಕ್ಷ ಉಳಿಸಿಕೊಂಡಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ
ಸಾಲ ಮನ್ನಾ ಪ್ರಕಟಿಸಲಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ಎರಡೇ ತಾಸಿನಲ್ಲಿ ಕಮಲ್ ನಾಥ್ 2 ಲಕ್ಷ ರು. ವರೆಗಿನ ಕೃಷಿ ಸಾಲ ಮನ್ನಾ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಇನ್ನು ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಕೂಡ ಇದೇ ಹಾದಿ ಅನುಸರಿಸಿ, ಮೊದಲ ಸಂಪುಟ ಸಭೆಯಲ್ಲೇ ಸಾಲ ಮನ್ನಾ ನಿರ್ಣಯ ಕೈಗೊಂಡರು.
ಇಲ್ಲಿ 16.65 ಲಕ್ಷ ರೈತರ ಸಹಕಾರ- ಗ್ರಾಮೀಣ ಬ್ಯಾಂಕ್ನ ಎಲ್ಲ ಅಲ್ಪಾವಧಿ ಕೃಷಿಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 6100 ಕೋಟಿ ಹೊರೆಯಾಗಲಿದೆ. ನಂತರದ ದಿನದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲಾಗುತ್ತದೆ. ರಾಜಸ್ಥಾನದಲ್ಲೂ ಇಂಥದ್ದೇ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು ಅಲ್ಲಿ ಇನ್ನೂ ಸಾಲ ಮನ್ನಾ ಘೋಷಣೆ ಬಾಕಿ ಇದೆ.
ಮಧ್ಯಪ್ರದೇಶದಲ್ಲಿ 56 ಸಾವಿರ ಕೋಟಿ ಹೊರೆ: ಮಧ್ಯಪ್ರದೇಶದಲ್ಲಿ ಕಮಲ್ನಾಥ ಮಾಡಿದ ಘೋಷಣೆ ಪ್ರಕಾರ 2018ರ ಮಾರ್ಚ್ 31ರೊಳಗೆ ರೈತರು ಮಾಡಿದ 2 ಲಕ್ಷ ರುಪಾಯಿವರೆಗಿನ ಸಾಲ ಮನ್ನಾ ಆಗಲಿದೆ. ರಾಷ್ಟ್ರೀಕೃತ ಹಾಗೂ ಸಹಕಾರ ಸಾಲಗಳಿಗೆ ಮನ್ನಾ ಅನ್ವಯವಾಗಲಿದೆ. ಇದು ಸರ್ಕಾರದ ಬೊಕ್ಕಸಕ್ಕೆ 56 ಸಾವಿರ ಕೋಟಿ ರುಪಾಯಿ ಹೊರೆ ಹೊರಿಸಬಹುದು ಎಂದು ಹೇಳಲಾಗಿದೆ.
ಇದಲ್ಲದೆ ಅನುತ್ಪಾದಕ ಸಾಲದ ಮೊತ್ತ ಸುಮಾರು 12 ಸಾವಿರ ಕೋಟಿ ರು. ಇದೆ. ಜೂನ್ 7ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಪೀಪ್ಲಿಯಾ ಮಂಡಿ ಎಂಬಲ್ಲಿ ಮೊದಲ ಬಾರಿಗೆ ಸಾಲ ಮನ್ನಾ ಭರವಸೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.